ವಯಸ್ಸಹಜ ಅನಾರೋಗ್ಯದ ಬಳಲುತ್ತಿದ್ದ ಕೆಜಿಎಫ್ ಸಿನಿಮಾ ಖ್ಯಾತಿಯ ತಾತ ಕೃಷ್ಣ ಜಿ ರಾವ್ ಇಂದು (ಡಿ. 7) ನಿಧನರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕೃಷ್ಣ ಅವರನ್ನು ಬೆಂಗಳೂರಿನ ಸೀತಾ ಸರ್ಕಲ್ ಬಳಿಯ ವಿನಾಯಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಶ್ವಾಸಕೋಶ ಸೋಂಕಿಗೆ ಚಿಕಿತ್ಸೆ ನೀಡಲಾಗಿತ್ತಾದರೂ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಕೃಷ್ಣ ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ವಿಷಯ ತಿಳಿದ ಸಿನಿಪ್ರಿಯರು, ಕೃಷ್ಣ ಜಿ. ರಾವ್ ಆದಷ್ಟು ಬೇಗ ಚೇತರಿಸಿಕೊಂಡು ವಾಪಸಾಗಲಿ ಎಂದು ಪ್ರಾರ್ಥನೆ ಮಾಡಿದ್ದರು. ಆದರೆ, ಆ ಪ್ರಾರ್ಥನೆ ಫಲ ನೀಡಲಿಲ್ಲ.ಕೃಷ್ಣ ಜಿ. ರಾವ್ ಕೆಜಿಎಫ್ ಚಿತ್ರದಲ್ಲಿ ಅಂಧ ವೃದ್ಧನ ಪಾತ್ರದಲ್ಲಿ ನಟಿಸಿದ್ದರು. ಭಾಗ 2 ರಲ್ಲಿ ”ನಿಮಗೊಂದು ಸಲಹೆ ಕೊಡ್ತೀನಿ, ನೀವು ಮಾತ್ರ ಅವನಿಗೆ ಅಡ್ಡ ನಿಲ್ಲೋಕೆ ಹೋಗ್ಬೇಡಿ ಸಾರ್” ಎಂದು ಜೋಶ್ ಆಗಿ ಹೇಳುವ ಈ ತಾತನ ಡೈಲಾಗ್ ಬಹಳ ಫೇಮಸ್ ಆಗಿತ್ತು.