ಉಡುಪಿ: ಕಾರ್ಕಳದ ಭ್ರಷ್ಟಾಚಾರದ ದಾಖಲೆಗಳಿದ್ದು, ಒಂದೊಂದಾಗಿ ಬಿಚ್ಚಿಡುತ್ತೇನೆ. ಮುಂದಿನ ದಿನಗಳಲ್ಲಿ ನಿಮ್ಮ ಮೇಲೆ ಕೇಸ್ ಹಾಕುತ್ತೇನೆ. ಸೋಲು ಒಪ್ಪಿ, ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಸಚಿವ ಸುನೀಲ್ ಕುಮಾರ್ ವಿರುದ್ಧ ಪರೋಕ್ಷವಾಗಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ವಾಗ್ದಾಳಿ ಮಾಡಿದ್ದಾರೆ. ಕಾರ್ಯಕರ್ತರಿಗೆ ಭಯಪಡಿಸುವ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು. ಉಡುಪಿಯಲ್ಲಿ ಇಂದು (ಡಿ.17) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾರ್ಕಳದಲ್ಲಿ ಕೇಸ್ ಹಾಕೋದು, ಹೆದರಿಸುವ ಕೆಲಸ ಮಾಡುತ್ತಿದ್ದಾರೆ ನಮ್ಮ ಸಚಿವ ಸುನೀಲ್ ಕುಮಾರ್ ಚುನಾವಣೆಗೂ ಮೊದಲೇ ಸೋಲೊಪ್ಪಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ 3 ಸಾವಿರ ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಇದೆ. ಇಡೀ ರಾಜ್ಯದಲ್ಲಿ 18 ಹಿಂದೂ ಒಕ್ಕೂಟ ಬಿಜೆಪಿ ವಿರುದ್ಧ ನಿಲ್ಲಲಿದೆ. ಲವ್ ಜಿಹಾದ್, ಗೋವು ಕಳ್ಳತನ ಕಾರ್ಕಳ ಕ್ಷೇತ್ರದಲ್ಲಿ ಹೆಚ್ಚುತ್ತಿದೆ. ಹಿಂದೂ ವಿಚಾರಧಾರೆ ಕಡೆಗಣಿಸಿದ್ದೀರಿ. ಕಾಂಗ್ರೆಸ್ ಕೂಡ ಇದನ್ನೇ ಅಂದು ಮಾಡಿತು ನೀವೂ ಅದೇ ಮಾಡುತ್ತಿದ್ದೀರಾ? ಮುಂದಿನ ದಿನಗಳಲ್ಲಿ ನಿಮಗೆ ಸೋಲು ಗ್ಯಾರೆಂಟಿ ಎಂದು ವಾಗ್ದಾಳಿ ಮಾಡಿದರು.