ಸುಳ್ಯ: ಇಲ್ಲಿನ ಸುಪ್ರಸಿದ್ಧ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಅಂಗವಾಗಿ ಪೂರ್ವಭಾವಿ ಸಭೆಯನ್ನು ಜ.2 ರಂದು ದೇವಸ್ಥಾನದಲ್ಲಿ ಜರುಗಿತು. ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರವರು ಜಾತ್ರೋತ್ಸವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಮಾತನಾಡಿ ಸುಳ್ಯದಲ್ಲಿ ಈಗ ಯಾವುದೇ ಕೊರೊನಾ ಕೇಸ್ ಇಲ್ಲ. ಆದರೆ ಕೊರೊನಾ ಬಗ್ಗೆ ಮಾರ್ಗಸೂಚಿಗಳು ಬಂದಿರುತ್ತದೆ. ಒಳಾಂಗಣದಲ್ಲಿ ಮಾಸ್ಕ್ ಹಾಕುವಂತೆ ಹಾಗೂ ಮಾರ್ಗಸೂಚಿಗಳನ್ನು ಅನುಸರಿಸುವಂತೆ ತಿಳಿಸಿದರು. ಸುಳ್ಯ ಪೊಲೀಸ್ ಠಾಣೆ ಎಸ್.ಐ.ದಿಲೀಪ್ ಎಂ.ಆರ್. ರವರು ವಾಹನ ಪಾರ್ಕಿಂಗ್ ಮತ್ತು ಜಾತ್ರೋತ್ಸವ ಸಂದರ್ಭದಲ್ಲಿ ಸಿ.ಸಿ.ಕೆಮರಾಗಳನ್ನು ಅಳವಡಿಸುವಂತೆ ಸೂಚಿಸಿದರು. ಅಂಗಡಿಗಳ ಏಲಂ ಬಗ್ಗೆ ಪ್ರಮುಖರಾದ ದಾಮೋದರ ಮಂಚಿ ಮತ್ತು ರವಿಯವರು ಕೇಳಿದ ವಿಷಯಕ್ಕೆ
ಕೃಪಾಶಂಕರರವರು ಅಂಗಡಿಗಳ ಏಲಂ ಬಗ್ಗೆ ಮಾತನಾಡಿ ನಾವು ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ಮಾಡಿದ್ದೇವೆ ಎಂದು ಹೇಳಿದರು. ಆಗ ನ್ಯಾಯವಾದಿ ವೆಂಕಪ್ಪ ಗೌಡ, ಪಿ.ಎಸ್.ಗಂಗಾಧರ್, ಶ್ರೀಕೃಷ್ಣ ಭಟ್, ನ್ಯಾಯವಾದಿ ಜಯಪ್ರಕಾಶ್ ರೈ,ಗೋಕುಲದಾಸ್ ಮತ್ತಿತರರು ಇಲಾಖೆಯ ನಿಯಮದಲ್ಲಿ ಏನೇನಿದೆ ಓದಿ ಹೇಳಿ ಎಂದು ಹೇಳಿದರು. ಕೃಪಾಶಂಕರ್ ಧಾರ್ಮಿಕ ದತ್ತಿ ಇಲಾಖೆಯ ನಿಯಮವನ್ನು ಓದಿ ಹೇಳಿದರು. ಅದರಲ್ಲಿ ದೇವಸ್ಥಾನಕ್ಕೆ ಸಂಬಂದಪಟ್ಟ ಬಿಲ್ಡಿಂಗ್ ಮತ್ತು ಕಟ್ಟಡ ಟೆಂಡರನ್ನು ಇತರರಿಗೆ ನೀಡಬಾರದೆಂದು ಇತ್ತು, ಜಾತ್ರೆಯ ಸಂತೆ ಏಲಂ ಬಗ್ಗೆ ಯಾವುದೇ ನಿಬಂಧನೆಗಳು ಇರಲಿಲ್ಲ. ಆದುದರಿಂದ ಈ ಹಿಂದೆ ಯಾವ ರೀತಿ ಸಂತೆ ಏಲಂ ಆಗುತ್ತಿತ್ತೋ ಹಾಗೆಯೇ ಮುಂದುವರಿಸುವಂತೆ ನಿರ್ಣಯಿಸಲಾಯಿತು. ಟ್ರಾಫಿಕ್ ನಿಯಂತ್ರಣ ಮಾಡಲು ಎ.ಪಿ.ಎಂ.ಸಿ ಪ್ರಾಂಗಣ, ಪ್ರಭು ಗ್ರೌಂಡ್ ಬಳಿ ವಾಹನ ಪಾರ್ಕಿಂಗ್ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಜಾತ್ರಾ ಸಮಯದಲ್ಲಿ ಹೆಚ್ಚುವರಿ ಕೆ.ಎಸ್.ಆರ್.ಟಿ.ಸಿ ಬಸ್ ಗಳನ್ನು ನಿಯೋಜಿಸುವಂತೆ ಮನವಿ ನೀಡುವ ಬಗ್ಗೆ ನಿರ್ಣಯಿಸಲಾಯಿತು. ಸ್ವಚ್ಛತೆಯಬಗ್ಗೆ ಅಲ್ಲಲ್ಲಿ ಡಸ್ಟ್ ಬಿನ್ ವ್ಯವಸ್ಥೆ ಮಾಡುವ ಬಗ್ಗೆ ಅಂಗಡಿಯವರಿಗೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಮನವರಿಕೆ ಮಾಡುವ ಬಗ್ಗೆ ಮತ್ತು ಬಟ್ಟೆ ಚೀಲಗಳ ಅಂಗಡಿ ಹಾಕುವ ಬಗ್ಗೆ ನಗರ ಪಂಚಾಯತ್ ಅಧ್ಯಕ್ಷ ವಿನಯ ಕಂದಡ್ಕ ತಿಳಿಸಿದರು. ಈ ಕಾರ್ಯವನ್ನು ಕೃಪಾಶಂಕರ್ ಸ್ವಾಗತಿಸಿದರು, ಜೀರ್ಣೋದ್ಧಾರ ಸಮಿತಿ ಸದಸ್ಯೆ ಮೀನಾಕ್ಷಿ ಗೌಡ ವಂದಿಸಿದರು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಎನ್.ಜಯಪ್ರಕಾಶ್ ರೈ, ಲಿಂಗಪ್ಪ ಗೌಡ ಕೇರ್ಪಳ, ಎಂ.ಮೀನಾಕ್ಷಿ ಗೌಡ, ಎಸ್.ಐ.ದಿಲೀಪ್, ಡಾ.ನಂದಕುಮಾರ್, ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಸದಸ್ಯೆ ಶ್ರೀಮತಿ ಕಿಶೋರಿ ಶೇಟ್ ಉಪಸ್ಥಿತರಿದ್ದರು.
Advertisement
Advertisement