ಅನೇಕ ವರ್ಷದಿಂದ ಸುಣ್ಣಬಣ್ಣ ಕಾಣದ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು, ಬೆಳ್ಳೂರು ಹೋಬಳಿ ಕಂಚನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭರವಸೆ ಟ್ರಸ್ಟ್ ವತಿಯಿಂದ ಕರುನಾಡ ಸೇವಕರು ತಂಡದ ಸಹಾಯದೊಂದಿಗೆ ಸ್ವಯಂಪ್ರೇರಿತವಾಗಿ ಸುಣ್ಣ ಬಣ್ಣ ಬಳಿಯುವ ಮೂಲಕ ಸುಂದರಗೊಳಿಸಲಾಯಿತು.

ಕಳೆದ ಮೂರು ವರ್ಷದಿಂದ ಸಮಾಜಮುಖೀ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಭರವಸೆ ಟ್ರಸ್ಟ್ ತಂಡದ ಕಾರ್ಯಕರ್ತರು ತಮ್ಮದೇ ಸ್ವಂತ ಖರ್ಚಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯದ ಜಾಗೃತಿ ಮೂಡಿಸುವುದರ ಜೊತೆಗೆ ಇತ್ಯಾದಿ ಹಲವು ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದಾರೆ.
ಈ ಬಾರಿ ಸಂಘಟನೆಯ ಸದಸ್ಯರು ಹಾಗೂ ಕಲಾವಿದರು ಸೇರಿದಂತೆ ಸುಮಾರು 30 ಮಂದಿ ಎರಡು ದಿನಗಳ ಕಾಲ ಸುಣ್ಣ ಬಣ್ಣ ಬಳೆದು ಶಾಲೆಗೆ ಹೊಸ ಮೆರಗನ್ನು ತಂದಿದ್ದಾರೆ.
ಈ ಶಾಲೆಯಲ್ಲಿ 50 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಹಳೆಯ ಕಟ್ಟಡಕ್ಕೆ ಕಳೆದ ಹದಿನೈದು ವರ್ಷದಿಂದ ಸುಣ್ಣಬಣ್ಣ ಮಾಡಿರಲಿಲ್ಲ. ಸುಣ್ಣ ಬಣ್ಣ ಬಳೆದು ಸರ್ಕಾರಿ ಶಾಲೆಯನ್ನು ಸುಂದರಗೊಳಿಸಿರುವುದರಿಂದ ಮುಂದಿನ ವರ್ಷಗಳಲ್ಲಿ ಪ್ರವೇಶ ಸಂಖ್ಯೆಯಲ್ಲಿ ಏರಿಕೆ ಕಾಣುವ ನಿರೀಕ್ಷೆಯಲ್ಲಿದ್ದಾರೆ.
ಮಕ್ಕಳನ್ನು ಶಾಲೆಗೆ ಆಕರ್ಷಿಸುವ ನಿಟ್ಟಿನಲ್ಲಿ ಕೆಲವೊಂದು ಚಿತ್ತಾರವನ್ನು ಶಾಲೆಯ ಗೋಡೆ ಹಾಗೂ ಕಾಂಪೌಂಡ್ ಮೇಲೆ ಮಾಡಿದ್ದಾರೆ. ರಾಷ್ಟ್ರ ಕವಿ ಕುವೆಂಪು, ಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಶ್ರೀಗಳ ಭಾವಚಿತ್ರ ಸೇರಿದಂತೆ ಹಲವು ಚಿತ್ರ ಹಾಗೂ ಸಂದೇಶ ಶಾಲೆಯ ಗೋಡೆಯ ಮೇಲೆ ಕುಂಚದಿಂದ ಸೃಷ್ಟಿಸಿದ್ದಾರೆ.
ಈ ಸಂದರ್ಭದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ತಂಡದೊಂದಿಗೆ ಸೇರಿ, ಚಿತ್ರಕಲೆಯನ್ನು ಕಲಿಯುವುದರ ಜೊತೆಗೆ, ತಮ್ಮ ಶಾಲೆಯ ಬದಲಾವಣೆಯನ್ನು ಕಂಡು ತುಂಬಾ ಖುಷಿಪಟ್ಟರು.
ಸುಂದರೀಕರಣದ ಕೆಲಸ ಮುಗಿಸಿ ಇಂದು ಶಾಲೆಯಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ವತಿಯಿಂದ ಕರುನಾಡ ಸೇವಕರು ತಂಡದ ವಿನೋದ್ ಗೌಡ ಹಾಗು ಭರವಸೆ ತಂಡದ ಸದಸ್ಯರಿಗೆ ಸನ್ಮಾನಿಸಲಾಯಿತಿ.