ಕಲ್ಲುಗುಂಡಿಯಲ್ಲಿ ಪರವಾನಿಗೆ ರಹಿತ ಕಾರ್ಯಾಚರಿಸುತ್ತಿದ್ದ ಮಾಂಬುಳಿ ಕ್ಲಿನಿಕ್ ನ್ನು ಆರೋಗ್ಯ ಇಲಾಖೆ ಬಂದ್ ಮಾಡಿಸಿದ ಘಟನೆ ವರದಿಯಾಗಿದೆ. ಅಲ್ಲದೆ ಕ್ಲಿನಿಕ್ ನಡೆಸುತ್ತಿದ್ದವರ ಮೇಲೆ ಕೇಸು ದಾಖಲಿಸಲಾಗಿದೆ.

ಕ್ಲಿನಿಕ್ ನಲ್ಲಿದ್ದ ವಸ್ತುನ್ನು ಮುಟ್ಟುಗೋಲು ಹಾಕಲಾಗಿದೆ. ರೋಸ್ಲಿ ಮ್ಯಾಥ್ಯೂ ಎಂಬವರು ಪರವಾನಿಗೆ ಇಲ್ಲದೆ ಮಾಂಬುಳಿ ಕ್ಲಿನಿಕ್ ನಡೆಸುತ್ತಿದ್ದು ಈ ಕುರಿತು ಆರೋಗ್ಯ ಇಲಾಖೆಗೆ ದೂರು ಒಂದು ಬಂದಿತ್ತು. ಇದರನ್ವಯ ಆರೋಗ್ಯ ಇಲಾಖೆ ಕಡೆಯಿಂದ ಕ್ಲಿನಿಕ್ ನಡೆಸುತ್ತಿರುವ ಬಗ್ಗೆ ಕರ್ನಾಟಕ ಆಯುರ್ವೇದ, ಯುವಾನಿ ವೈದ್ಯ ಮಂಡಳಿಯಿಂದ ನೋಂದಣಿ ಪ್ರಮಾಣ ಪತ್ರ ಸಲ್ಲಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಮೂರು ಬಾರಿ ನೋಟೀಸ್ ನೀಡಲಾಗಿತ್ತು. ಆದರೆ ಯಾವುದಕ್ಕೂ ಪ್ರತಿಕ್ರಿಯೆ ನೀಡಿರಲಿಲ್ಲ. ಕೆಪಿಎಂಇ ನೋಂದಣಿ ಇಲ್ಲದೆ ಕ್ಲಿನಿಕ್ ನಡೆಸುವುದು ಕೆಪಿಎಂಇ ಕಾಯ್ದೆ19 ರ ಪ್ರಕಾರ ಕಾನೂನು ಬಾಹಿರವಾಗಿದೆ. ಆದ್ದರಿಂದ ಕ್ಲಿನಿಕನ್ನು ಶಾಶ್ವತವಾಗಿ ಮುಚ್ಚಲು ಸ್ಥಳೀಯ ಪ್ರಾಧಿಕಾರಕ್ಕೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಿಂದ ನೋಟೀಸ್ ಜಾರಿಯಾಗಿತ್ತು. ಕಳೆದ ವಾರ ಜಿಲ್ಲಾಧಿಕಾರಿಗಳು ಹಾಗೂ ಕೆಪಿಎಂಇ ಪ್ರಾಧಿಕಾರ ಅಧ್ಯಕ್ಷರು ಕೂಡಾ ಕ್ಲೀನಿಕ್ ಮುಚ್ಚಿಸಲು ನೋಟೀಸ್ ಜಾರಿ ಮಾಡಿದ್ದರು. ಆದರೆ ರೋಸ್ಲಿಯವರು ಕ್ಲಿನಿಕ್ ಮುಚ್ಚಿರಲಿಲ್ಲ. ಈ ಬಗ್ಗರ ಮಾಹಿತಿ ಪಡೆದ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು, ಕೆಪಿಎಂಇ ನೋಡಲ್ ಅಧಿಕಾರಿ ಡಾ. ದೀಪಾ ಪ್ರಭು ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಕ್ಲಿನಿಕ್ ಬಂದ್ ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ, ಸ್ಥಳೀಯ ಕೆಪಿಎಂಇ ಅಧಿಕಾರಿ ಡಾ.ನಂದಕುಮಾರ್ ಬಿ, ಬಿಪಿಎಂ ಆಶಿಕ್, ಗುಲ್ಜಾರ್ ಬಾನು ಹಾಗೂ ಪೋಲೀಸ್ ಇಲಾಖೆಯ ಅಧಿಕಾರಿಗಳು ಜತೆಗಿದ್ದರು.