ಚುನಾವಣೆ ಹೊತ್ತಲ್ಲಿ ಪ್ರಚಾರ ಟೀಕೆಗಳು ಇದ್ದೇ ಇರುತ್ತೆ. ಆದ್ರೆ ತೀರಾ ವೈಯಕ್ತಿಕ ಎನಿಸುವಷ್ಟರ ಮಟ್ಟಿಗೆ ಇಳಿಯುವುದು ಒಳ್ಳೆಯದಲ್ಲ. ಆದ್ರೆ ಇಲ್ಲಿ ಅಂತಹದ್ದೊಂದು ಘಟನೆ ನಡೆದುಹೋಗಿದೆ. ಹೊಲಸು ರಾಜಕಾರಣ ಎಂಬ ಶಬ್ದಕ್ಕೆ ಇದೊಂದು ನಿದರ್ಶನ. ರಾಜಕೀಯ ನಾಯಕರ ಚಿತ್ರವನ್ನ ಬಳಸಿ ತೀರಾ ಕೆಟ್ಟದು ಎನಿಸುವಂತಹ ಪದ ಬಳಕೆ ಮಾಡಿರುವ ಪ್ರಕರಣ ಇದು. ಈ ಬಗ್ಗೆ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಕ್ಷ ಯಾವುದೇ ಇರಲಿ, ಲಕ್ಷಾಂತರ ಜನರು ಚುನಾಯಿಸಿದ ಪ್ರಧಾನಮಂತ್ರಿ, ಮುಖ್ಯಮಂತ್ರಿ ಅವರಿಗೆ ಗೌರವ ಕೊಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ.
ಆದರೆ ಕೆಲವರು ರಾಜಕೀಯದ ಹೆಸರಿನಲ್ಲಿ ವೈಯಕ್ತಿಕ ವಿಚಾರವನ್ನ ಬೀದಿಗೆ ತರುವುದು ಬೇಸರದ ವಿಚಾರ. ಯೂತ್ ಕಾಂಗ್ರೆಸ್ ಮುಖಂಡ ಶಶಾಂಕ್ ಗೌಡ ಅವರು ಜಾಲಹಳ್ಳಿ ಪೊಲೀಸ ಠಾಣೆಗೆ ದೂರು ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕುಸುಮಾ ಹನುಮಂತರಾಯಪ್ಪ ಹಾಗೂ ಸಂಸದ ಡಿಕೆ ಸುರೇಶ್ ಅವರ ಫೋಟೋ ಹಾಕಿ ವೈಯುಕ್ತಿಕವಾಗಿ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿ ಬಿಟ್ಟಿದ್ದಾರೆ.
ಅಷ್ಟೇ ಅಲ್ಲ ಗೌರವಾನ್ವಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಟಿಪ್ಪು ಸುಲ್ತಾನ್ ಫೋಟೋವನ್ನ ಅಸಹ್ಯಕರವಾದ ರೀತಿಯಲ್ಲಿ ಎಡಿಟ್ ಮಾಡಿ ಹರಿಬಿಡಲಾಗಿದೆ. ಅಷ್ಟಕ್ಕೆ ಮುಗಿಯದೆ ದತ್ತುಪುತ್ರ ದಾಸಿ ಪುತ್ರ ಎಂದು ಬರೆದು ಫೋಟೋ ಎಡಿಟ್ ಮಾಡಿ ಮುಖ್ಯಮಂತ್ರಿಗಳ ಗೌರವಕ್ಕೆ ಚ್ಯುತಿ ತರಲಾಗಿದೆ. ದುರಂತ ಅಂದ್ರೆ ಇದೆಲ್ಲ ಕಮೆಂಟ್ ಗಳು, ಫೋಟೋಗಳು ಬಿಡುಗಡೆಯಾಗಿದ್ದು ಯತೀಂದ್ರ ಸಿದ್ದರಾಮಯ್ಯ ಅಭಿಮಾನಿ ಬಳಗ ಎಂಬ ಫೇಸ್ ಬುಕ್ ಪೇಜ್ ನಿಂದ. ಮಗನಿಂದಲೇ ಅಪ್ಪನ ನಿಂದನೆ ಎಂಬಂತೆ ಬಿಂಬಿಸುವ ಮೂಲಕ ವಿಕೃತಿ ಮೆರೆಯಲಾಗಿದೆ. ಹೀಗಾಗಿ ಮರ್ಯಾದೆಗೆ ಚ್ಯುತಿ ತಂದ ಹಿನ್ನೆಲೆ ಸಾಕ್ಷಿ ಸಮೇತ ಶಶಾಂಕ್ ಗೌಡ ದೂರು ನೀಡಿದ್ದಾರೆ. ಸದ್ಯ ಎಫ್ ಬಿಯಲ್ಲಿರುವಂತಹ ಇಂತಹ ಪೋಸ್ಟ್ ಗಳನ್ನೂ ಕೂಡ ಪೊಲೀಸರು ಡಿಲೀಟ್ ಮಾಡಿದ್ದಾರೆ. ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ