ಪ್ರವಾಹಕ್ಕೆ ಸಿಲುಕಿ ಗಲ್ಫ್ ಉದ್ಯೋಗಿಯೋರ್ವರು ಮೃತಪಟ್ಟ ಘಟನೆ ಮಧೂರಿನಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಪಾಲಕುನ್ನು ಕರಿಪ್ಪೊಡಿಯ ಸಾದಿಕ್ (39) ಮೃತಪಟ್ಟವರು. ಪತ್ನಿ ಮನೆಗೆ ಬಂದಿದ್ದ ಸಾದಿಕ್ ಅವರು ಸಮೀಪದ ಸಂಬಂಧಿಕರೋರ್ವರ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಪ್ರವಾಹಕ್ಕೆ ಸಿಲುಕಿ ನೀರುಪಾಗಿದ್ದಾರೆ. ಅವರ ಜೊತೆಗಿದ್ದ ಪತ್ನಿಯ ಸಹೋದರ ಮೊಯ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಬೆಳಿಗ್ಗೆ ಮಧೂರು ಪಟ್ಲ ಮೊಗರ್ ಎಂಬಲ್ಲಿ ಈ ಘಟನೆ ನಡೆದಿದೆ. ಬಯಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾಲು ಜಾರಿ ಬಿದ್ದು ಈ ಘಟನೆ ನಡೆದಿದೆ. ಭಾರೀ ಮಳೆ ಹಿನ್ನಲೆಯಲ್ಲಿ ಮಧುವಾಹಿನಿ ನದಿ ಉಕ್ಕಿ ಹರಿಯುತ್ತಿತ್ತು. ಇದರಿಂದ ಬಯಲಿನಲ್ಲಿ ಪ್ರವಾಹ ಉಂಟಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿಗಳು, ನಾಗರಿಕರು ಶೋಧ ನಡೆಸಿ ಘಟನೆ ನಡೆದ ಅಲ್ಪ ದೂರದಿಂದ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ ಎನ್ನಲಾಗಿದೆ.
ಒಂದು ತಿಂಗಳ ಹಿಂದೆ ಊರಿಗೆ ಬಂದಿದ್ದ ಸಾದಿಕ್ ಕೆಲವೇ ದಿನಗಳಲ್ಲಿ ಗಲ್ಫ್ ಗೆ ಮರಳುವರಿದ್ದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.