18ನೇ ಐಪಿಎಲ್‌ (IPL 2025) ಆವೃತ್ತಿಯ ಟ್ರೋಫಿ ಗೆದ್ದ ಖುಷಿಯಲ್ಲಿ ಆರ್‌ಸಿಬಿ (RCB) ತಂಡ ಬುಧವಾರ ತವರಿಗೆ ಆಗಮಿಸಿದೆ. ಟ್ರೋಫಿ ಜಯಿಸಿದ ಆಟಗಾರರನ್ನು ಅಭಿಮಾನಿಗಳು ಸಂಭ್ರಮದಿಂದ ಬರಮಾಡಿಕೊಂಡರು.

ಆರ್‌ಸಿಬಿ ತಂಡದ ಆಟಗಾರರಿಗೆ ಹೆಎಎಲ್‌ ವಿಮಾನ ನಿಲ್ದಾಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ (D.K.Shivakumar) ಸ್ವಾಗತ ಕೋರಿದರು. ಈ ವೇಳೆ, ಆರ್‌ಸಿಬಿ ಸ್ಟಾರ್‌ ವಿರಾಟ್‌ ಕೊಹ್ಲಿಗೆ (Virat Kohli) ಕನ್ನಡದ ಬಾವುಟ ನೀಡಿದರು. ಕನ್ನಡ ಧ್ವಜ ಹಾರಿಸುವ ಮೂಲಕ ವಿರಾಟ್‌ ಖುಷಿಪಟ್ಟರು. ಇಂದು ವಿಧಾನಸೌಧದ ಬಳಿ ಸಂಭ್ರಮಾಚರಣೆ ಸಮಾರಂಭ ಇದೆ. ಈ ಹಿನ್ನೆಲೆಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರರು ಬೆಂಗಳೂರಿಗೆ ಆಗಮಿಸಿದ್ದಾರೆ. ಅವರನ್ನು ಸ್ವಾಗತಿಸಲು ಅಭಿಮಾನಿಗಳು ರಸ್ತೆಯುದ್ದಕ್ಕೂ ಕಿಕ್ಕಿರಿದು ಜಮಾಯಿಸಿದ್ದಾರೆ.ರಸ್ತೆಯದ್ದಕ್ಕೂ ಅಭಿಮಾನಿಗಳ ಸಾಗರವೇ ನೆರೆದಿದೆ. ರಜತ್‌ ಪಾಟೀದಾರ್‌ ಪಡೆಗೆ ಗ್ರ್ಯಾಂಡ್‌ ವೆಲ್‌ಕಮ್‌ ಕೋರಲು ಫ್ಯಾನ್ಸ್‌ ಕಾತರರಾಗಿದ್ದಾರೆ. ಮಂಗಳವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ 6 ರನ್‌ಗಳ ರೋಚಕ ಜಯ ಸಾಧಿಸಿತು. ಆ ಮೂಲಕ 18 ವರ್ಷಗಳ ಬಳಿಕ ಚೊಚ್ಚಲ ಐಪಿಎಲ್‌ ಟ್ರೋಫಿ ಎತ್ತಿ ಹಿಡಿಯಿತು. ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಇದು ನಿಜಕ್ಕೂ ಐತಿಹಾಸಿಕ ಕ್ಷಣವಾಗಿತ್ತು. ವಿರಾಟ್‌ ಕೊಹ್ಲಿಗೂ ಈ ಗೆಲುವು ವಿಶೇಷವಾಗಿತ್ತು.

Leave a Reply

Your email address will not be published. Required fields are marked *