ಸುಳ್ಯದ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆಗಳನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು ಮೆಸ್ಕಾಂ ಭೂಗತ ಕೇಬಲ್ ಅಳವಡಿಕೆ ವೇಳೆ ಹಾನಿ ಯಾಗಿರುವ ಕುರಿತು ವರದಿ ಮಾಡುವಂತೆ ಮತ್ತು ಅಗತ್ಯ ಕಾಮಗಾರಿಗಳಿಗೆ ತುರ್ತು ಪ್ರಸ್ತಾವನೆ ಸಲ್ಲಿಸಲು ರಾಧಾಕೃಷ್ಣ ಬೊಳ್ಳೂರು ಸಲಹೆ
ಸುಳ್ಯ ಬ್ಲಾಕ್ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ನೇತೃತ್ವದ ಕಾಂಗ್ರೆಸ್ ಮುಖಂಡರ ನಿಯೋಗ ಇಂದು ಸುಳ್ಯ ಲೋಕೋಪಯೋಗಿ ಇಲಾಖೆ ಉಪ ವಿಭಾಗಕ್ಕೆ ಭೇಟಿ ನೀಡಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗೋಪಾಲ್ ಮತ್ತು ಸಹಾಯಕ ಇಂಜಿನಿಯರ್ ಪರಮೇಶ್ವರ್ ರವರ ಬಳಿ ಚರ್ಚಿಸಿ ಸುಳ್ಯ ತಾಲೂಕಿನ ಲೋಕೋಪಯೋಗಿ ಇಲಾಖೆಗೆ ಸಂಬಂಧ ಪಟ್ಟ ಎಲ್ಲಾ ಮುಖ್ಯ ರಸ್ತೆಗಳ ಬದಿಯಲ್ಲಿ ಮತ್ತು ಬೆಳ್ಳಾರೆ- ಶೇಣಿ- ಚೊಕ್ಕಾಡಿ ರಸ್ತೆಯ ಇಕ್ಕೆಲೆಗಳಲ್ಲಿ ಮೆಸ್ಕಾಂ ಇಲಾಖೆ ಯವರು ಮತ್ತು ಬಹುಗ್ರಾಮ ಕುಡಿಯುವ ನೀರು ಯೋಜನೆಯವರು ಸುರಂಗ ಕೊರೆದು ಪೈಪ್ ಲೈನ್ ಮತ್ತು ಭೂಗತ ಕೇಬಲ್ ಅಳವಡಿಕೆ ಕಾಮಗಾರಿ ನಡೆಸುತ್ತಿದ್ದು ಇದರಿಂದಾಗಿ ರಸ್ತೆ ಹಾನಿಯಾಗಿರುವ ಕುರಿತು ಅಂದಾಜು ಪಟ್ಟಿ ತಯಾರಿಸಿ ಉಂಟಾಗಿರುವ ನಷ್ಟವನ್ನು ಘೋಷಿಸಬೇಕು. ಮತ್ತು ಅದರ ಮರುಸ್ಥಾಪನೆಗೆ ಅಂದಾಜು ಪಟ್ಟಿ ತಯಾರಿಸಬೇಕು. ಲೋಕೋಪಯೋಗಿ ಇಲಾಖೆ ರಸ್ತೆಗಳು ಸಾರ್ವಜನಿಕರ ನಿತ್ಯ ಬಳಕೆಯ ಬಹು ಮುಖ್ಯ ಮೂಲ ಸೌಕರ್ಯ ವಾಗಿರುವುದರಿಂದ ಹಾನಿ ಮಾಡಿರುವ ಇಲಾಖೆ ಅಥವಾ ಗುತ್ತಿಗೆದಾರರಿಂದ ಕೂಡಲೇ ದುರಸ್ಥಿ ಪಡಿಸುವ ಕಾರ್ಯ ವಾಗಬೇಕು ಎಂದು ಹೇಳಿದರು.
ತಾಲೂಕಿನ ಇತರ ಪ್ರಮುಖ ರಸ್ತೆ ಗಳ ದುರಸ್ಥಿ ಮತ್ತು ಹೊಸ ಕಾಮಗಾರಿಗಳಿಗೆ ಪ್ರಸ್ತಾವನೆ ತಯಾರಿಸಿ ಸರಕಾರಕ್ಕೆ ಸಲ್ಲಿಸಬೇಕು, ಸರಕಾರದ ಮಟ್ಟದಲ್ಲಿ ನಾವು ಒತ್ತಡ ತರುವ ಪ್ರಯತ್ನ ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ಬೊಳ್ಳೂರು ಭರವಸೆ ನೀಡಿದರು.
ಅಲ್ಲದೆ ಮಳೆಗಾಲದ ರಸ್ತೆ ಬದಿ ಚರಂಡಿ ಸ್ವಚ್ಛ ಗೊಳಿಸುವ ಕಾರ್ಯವನ್ನು ಆದಷ್ಟು ಬೇಗ ಮುಗಿಸಬೇಕು, ಮಳೆಗಾಲ ಮುಗಿದ ಕೂಡಲೇ ಇತರ ಅನುಮೋದನೆ ಗೊಂಡಿರುವ ಕಾಮಗಾರಿಗಳನ್ನು ಸಮಯಮಿತಿಯಲ್ಲಿ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಭವಾನಿಶಂಕರ್ ಕಲ್ಮಡ್ಕ, ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಸತ್ಯಕುಮಾರ್ ಆಡಿಂಜ, ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ ಗೋಕುಲ್ ದಾಸ್, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ ಜೆ, ವಿಜಯಕುಮಾರ್ ಆಲೆಟ್ಟಿ ಉಪಸ್ಥಿತರಿದ್ದರು.