ಎನ್ನೆಂಸಿ ನೇಚರ್ ಕ್ಲಬ್ ವಾರ್ಷಿಕ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮ
ಎನ್ನೆಂಸಿ ಸುಳ್ಯ; ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ನೇಚರ್ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವಿಶೇಷ ಉಪನ್ಯಾಸ ಮತ್ತು 2024-25ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಜೂನ್ 05 ಗುರುವಾರದಂದು ಕಾಲೇಜು ದೃಶ್ಯ ಶ್ರವಣ ಕೊಠಡಿಯಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಜೀವ ವಿಜ್ಞಾನ ಉಪನ್ಯಾಸಕರಾದ ಡಾ. ಸಂಧ್ಯಾ ಕೆ ಮಾತನಾಡಿ, ಪರಿಸರ ದಿನದ ಮಹತ್ವಗಳನ್ನು, ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಆಗುತ್ತಿರುವ ತೊಂದರೆಗಳನ್ನು, ಪರಿಹಾರ ವಿಧಾನಗಳನ್ನು ವಿವರಿಸಿದರು. ನಮ್ಮಲ್ಲಿ ನಿಜವಾದ ಪರಿಸರ ಕಾಳಜಿ ನಿರಂತರವಾಗಿರಬೇಕು ಎಂದರು. ಹಾಗೆಯೇ ಬದುಕಿನ ಯಶಸ್ವಿಗೆ ಪದವಿ ವಿದ್ಯಾಭ್ಯಾಸ ಹಂತ ಅಮೂಲ್ಯ ಸಮಯ. ಜೀವನದಲ್ಲಿ ತಾನು ಏನಾಗಬೇಕು ಎಂಬ ನಿರ್ಧಾರ ಮಾಡಿಕೊಂಡು, ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪೋಷಕರು ಗುರುಗಳು ಹೆಮ್ಮೆಪಡುವ ಸಾಧನೆಗಳನ್ನು ಮಾಡಬೇಕು ಎಂದರು. ಜತೆಗೆ ವಿಜ್ಞಾನ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ವಿವಿಧ ಕ್ಷೇತ್ರಗಳ ಆಯ್ಕೆಗೆ ಇರುವ ಅಪೂರ್ವ ಅವಕಾಶಗಳು ಮತ್ತು ಅಗತ್ಯ ಪ್ರಯತ್ನಗಳ ಬಗ್ಗೆ ವಿವರಿಸಿದರು.
ಗೌರವ ಅತಿಥಿಗಳಾದ ನೆಹರೂ ಮೆಮೋರಿಯಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಿತಾಲಿ ಪಿ ರೈ ಮಾತನಾಡಿ ಎಲ್ಲಾ ವಿದ್ಯಾರ್ಥಿಗಳು ಶೃದ್ದೆಯಿಂದ ನೇಚರ್ ಕ್ಲಬ್ ಕಾರ್ಯಕ್ರಮಗಳಲ್ಲಿ ಶಿಸ್ತು ಬದ್ಧತೆಯಿಂದ ಭಾಗವಿಸುತ್ತಿರುವುದು ಸಂತಸದ ವಿಚಾರ. ಇಲ್ಲಿ ಗಳಿಸಿದ ಅನುಭವ ನಾಳೆಯ ನಿಮ್ಮ ಹೊಸ ಬದುಕಿನ ದಿನಗಳ ಯಶಸ್ಸಿಗೆ ಪ್ರೇರಣೆಯಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ ವಹಿಸಿದ್ದು ಕ್ಲಬ್ ನ ವಾರ್ಷಿಕ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ ಬೀಳ್ಕೊಡುತ್ತಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ನೇಚರ್ ಕ್ಲಬ್ ಸಂಯೋಜಕ ಮತ್ತು ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಕುಲದೀಪ್ ಪೆಲ್ತಡ್ಕ ಪ್ರಾಸ್ತಾವಿಕ ಮಾತನಾಡಿ, ಕ್ಲಬ್ ಕಾರ್ಯದರ್ಶಿ ಕು. ಶಿಲ್ಪಾ ವಾರ್ಷಿಕ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ಶಶಾಂಕ್ ವಾರ್ಷಿಕ ಲೆಕ್ಕಪತ್ರ ಮಂಡಿಸಿ ಉಳಿಕೆಯನ್ನು ಕಿರಿಯ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು. ಅಭಿಜ್ಞಾ, ಪ್ರಾರ್ಥನಾ ಮತ್ತು ಅರ್ಪಿತಾ ಪ್ರಾರ್ಥಿಸಿ,
ನೇಚರ್ ಕ್ಲಬ್ ಪದಾಧಿಕಾರಿಗಳಾದ ಕಾರ್ತಿಕ್ ಸ್ವಾಗತಿಸಿ, ತನುಶ್ ವಂದಿಸಿದರು. ಕು. ಮನಸ್ವೀ ಅತಿಥಿಗಳನ್ನು ಪರಿಚಯಿಸಿ, ಕು. ಅಕ್ಷತ ಕಾರ್ಯಕ್ರಮ ನಿರೂಪಿಸಿದರು.
ಕಾಲೇಜಿನ ಮುಂಭಾಗದಲ್ಲಿ ಪುಟಾಣಿ ಜೈಷ್ಣವಿ ಮತ್ತು ಅತಿಥಿಗಳು ಔಷಧೀಯ ಸಸ್ಯ ಸೀತಾ ಅಶೋಕ ಗಿಡವನ್ನು ನೆಟ್ಟು ಪರಿಸರ ದಿನದ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ನೇಚರ್ ಕ್ಲಬ್ ಹಮ್ಮಿಕೊಂಡಿದ್ದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಬೀಳ್ಕೊಡುತ್ತಿರುವ ಜೀವವಿಜ್ಞಾನ ಪದವಿ ವಿದ್ಯಾರ್ಥಿಗಳು ನೇಚರ್ ಕ್ಲಬ್ ಒದಗಿಸಿದ ಅವಕಾಶಗಳನ್ನು ಮತ್ತು ಅವರ ಸವಿನೆನಪಿನ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಯಶಸ್ಸಿಗೆ ಉಪನ್ಯಾಸಕರಾದ ಕೃತಿಕಾ, ಪಲ್ಲವಿ, ಅಶ್ವಿತಾ ಮತ್ತು ರಕ್ಷಿತ್ ಹಾಗೂ ಸಿಬ್ಬಂದಿಗಳಾದ ಶಿವಾನಂದ, ಪವನ್, ಜಯಂತಿ, ಭವ್ಯ ಮತ್ತು ಗೀತಾ ಹಾಗೂ ಎಲ್ಲಾ ವಿದ್ಯಾರ್ಥಿಗಳು ಸಹಕರಿಸಿದರು.