ತಮಿಳಿನ ‘ಜೈಲರ್’ ಸಿನಿಮಾದ ವಿಲನ್, ಮಲಯಾಳಂ ಖ್ಯಾತ ನಟ ವಿನಾಯಕನ್ ಅವರನ್ನು ಹೈದರಾಬಾದ್​ನಲ್ಲಿ ಇಂದು (ಸೆಪ್ಟೆಂಬರ್ 07) ಬಂಧಿಸಲಾಗಿದೆ. ಹೈದರಾಬಾದ್​ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿಯ ಮೇಲೆ ಹಿನ್ನೆಲೆಯಲ್ಲಿ ವಿನಾಯಕನ್ ಅವರನ್ನು ಏರ್​ಪೋರ್ಟ್ ಪೊಲೀಸರು ಬಂಧಿಸಿದ್ದಾರೆ. ಏರ್​ಪೋರ್ಟ್​ ಭದ್ರತೆ ಸಿಬ್ಬಂದಿ (ಸಿಐಎಸ್​ಎಫ್) ನೀಡಿರುವ ದೂರಿನ ಆಧಾರದ ಮೇಲೆ ಎಫ್​ಐಆರ್ ಸಹ ದಾಖಲಾಗಿದೆ.

ಗೋವಾಕ್ಕೆ ಹೋಗುತ್ತಿದ್ದ ವಿನಾಯಕನ್, ಕನೆಕ್ಟಿಂಗ್ ಫ್ಲೈಟ್​ ಹತ್ತಲೆಂದು ಹೈದರಾಬಾದ್​ನಲ್ಲಿ ಇಳಿದಾಗ ವಿಮಾನ ನಿಲ್ದಾಣದ ಸಿಐಎಸ್​ಎಫ್ ಸಿಬ್ಬಂದಿ ಒಬ್ಬರೊಟ್ಟಿಗೆ ಜಗಳ ಮಾಡಿಕೊಂಡಿದ್ದು, ಹಲ್ಲೆ ಸಹ ಮಾಡಿದ್ದಾರೆ ಎಂದು ಏರ್​ಪೋರ್ಟ್​ ಭದ್ರತೆ ಸಿಬ್ಬಂದಿ ಆರೋಪ ಮಾಡಿದ್ದಾರೆ. ಆದರೆ ಮಲಯಾಳಂ ಪತ್ರಿಕೆ ಮನೋರಮಾ ಜೊತೆಗೆ ಮಾತನಾಡಿರುವ ವಿನಾಯಕನ್, ವ್ಯತಿರಿಕ್ತ ಹೇಳಿಕೆ ನೀಡಿದ್ದು, ಸಿಐಎಸ್​ಎಫ್ ಸಿಬ್ಬಂದಿಯೇ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಹೇಳಿದ್ದಾರೆ.

ಮನೋರಮಾಕ್ಕೆ ವಿನಾಯಕನ್ ನೀಡಿರುವ ಹೇಳಿಕೆಯಂತೆ, ಅವರು ಗೋವಾಕ್ಕೆ ತೆರಳುತ್ತಿದ್ದ ಹೈದರಾಬಾದ್​ನಲ್ಲಿ ಇಳಿದಿದ್ದಾರೆ. ಸಿಐಎಸ್​ಎಫ್ ಸಿಬ್ಬಂದಿ ಕೆಲವರು ಅವರನ್ನು ಒಂದು ಕೋಣೆಗೆ ಕರೆದುಕೊಂಡು ಹೋಗಿ ಹಿಗ್ಗಾ-ಮುಗ್ಗ ಥಳಿಸಿದರಂತೆ. ಸಣ್ಣ ವಿಷಯಕ್ಕೆ ಭದ್ರತಾ ಸಿಬ್ಬಂದಿ ಜೊತೆಗೆ ವಿನಾಯಕನ್ ಜಗಳ ಮಾಡಿದ್ದಕ್ಕೆ ತಮಗೆ ಹೀಗೆ ಥಳಿಸಿದ್ದಾರೆಂದು ಅವರೇ ಹೇಳಿಕೊಂಡಿದ್ದಾರೆ. ‘ನಾನು ಯಾವುದೇ ತಪ್ಪು ಮಾಡಿಲ್ಲ ಬೇಕಿದ್ದರೆ ಸಾಕ್ಷ್ಯವಾಗಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಬಹುದು’ ಎಂದು ವಿನಾಯಕನ್ ಹೇಳಿದ್ದಾಗಿ ಮನೋರಮಾ ವರದಿ ಮಾಡಿದೆ.

Leave a Reply

Your email address will not be published. Required fields are marked *