ಸುಳ್ಯ: ಕುಡಿಯುವ ನೀರಿನ ಯೋಜನೆಗಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಪೈಪ್ ಲೈನ್ ಕಾಮಗಾರಿ ನಡೆಸಲು ರಸ್ತೆ ಅಗೆದು ಹಾಕಿ, ಗುತ್ತಿಗೆದಾರರು ಕೇವಲ ಹೊಂಡಕ್ಕೆ ಮಣ್ಣು ಮಾತ್ರ ತುಂಬಿಸಿ ಕಾಣೆಯಾಗಿದ್ದರು.
ಇದರಿಂದ ವಾಹನ ಮತ್ತು ಜನ ಸಂಚಾರಕ್ಕೆ ತೀವ್ರ ರೀತಿಯ ಅಡಚಣೆ ಉಂಟಾಗಿ ನಗರದಲ್ಲಿ ಟ್ರಾಫಿಕ್ ಜಾಮ್ ನಂತಹ ಸಮಸ್ಯೆ ತಲೆದೋರಿದೆ. ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಪಟ್ಟ ಇಲಾಖೆ ಮತ್ತು ನಗರ ಪಂಚಾಯತ್ ಕೂಡಲೇ ಮುಂದಾಗಬೇಕು ಮತ್ತು ಸಂಚಾರ ಸುವ್ಯವಸ್ಥೆಯನ್ನು ಸುಗಮ ಪಡಿಸಿಕೊಡಬೇಕೆಂದು ಆಗ್ರಹಿಸಿ, ಎಸ್ ಡಿ ಪಿ ಐ ಸುಳ್ಯ ಬ್ಲಾಕ್ ಸಮಿತಿಯ ನಿಯೋಗದಿಂದ ನಗರ ಪಂಚಾಯತ್ ಮುಖ್ಯ ಅಧಿಕಾರಿಯನ್ನು ಸಂಪರ್ಕಿಸಿ ಮನವಿಯನ್ನು ಸಲ್ಲಿಸಲಾಗಿತ್ತು.
ಮನವಿ ಸ್ವೀಕರಿಸಿದ ಮುಖ್ಯ ಅಧಿಕಾರಿ ಏಳು ದಿನಗಳ ಕಾಲಾವಕಾಶವನ್ನು ಕೋರಿದ್ದು, ಮುಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಂತರ ಉತ್ತರಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಇಂದು ನಗರ ಪಂಚಾಯತ್ ಮುಖ್ಯಾಧಿಕಾರಿಗಳು, ಎಸ್ ಡಿ ಪಿ ಐ ನಾಯಕರನ್ನು ಸಂಪರ್ಕಿಸಿ ಮುಂದಿನ ಕೆಲವೇ ದಿನಗಳಲ್ಲಿ ಇದೇ ಮಾರ್ಗವಾಗಿ ಇನ್ನೊಂದು ನೀರಿನ ಪೈಪ್ ಹಾಕುವ ಯೋಜನೆ ಇರುವುದರಿಂದ ತಾತ್ಕಾಲಿಕವಾಗಿ ವೆಟ್ ಮಿಕ್ಸ್ (wet mix) ಹಾಕಿ ರಸ್ತೆಯನ್ನು ಸಂಚಾರ ಯೋಗ್ಯವನ್ನಾಗಿ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಅದರಂತೆ ಸಂಬಂಧಪಟ್ಟ ಸ್ಥಳಗಳಲ್ಲಿ ರಸ್ತೆಯನ್ನು ಸರಿಪಡಿಸಿ ಕೊಡಲು ಸಭೆಯಲ್ಲಿ ನಿರ್ಣಯ ಕೈಗೊಂಡು ಕಾಮಗಾರಿ ಪ್ರಾರಂಭವಾಗಿದೆ.