ಮಂಡ್ಯ ಫೆಬ್ರವರಿ 10: ಕೌಟುಂಬಿಕ ಕಲಹಕ್ಕೆ ಬೇಸತ್ತು ಗೃಹಿಣಿಯೊಬ್ಬರು ಪತಿಯ ಜಿಮ್ ನಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮದ್ದೂರು ತಾಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಕೆಸ್ತೂರು ಗ್ರಾಮದ ಗಿರೀಶ್ ಪತ್ನಿ ದಿವ್ಯ (31) ಆತ್ಮಹತ್ಯೆ ಶರಣಾದ ಮಹಿಳೆಯಾಗಿದ್ದು, ಮೃತರಿಗೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯಿದ್ದಾರೆ. ಕುಟುಂಬ ಕಲಹದಿಂದ ಬೇಸತ್ತು ಸೋಮವಾರ ಮಧ್ಯಾಹ್ನ ಜಿಮ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಮಾಚಳ್ಳಿ ಗ್ರಾಮದ ಗೋವಿಂದರವರ ಪುತ್ರಿ ದಿವ್ಯ ಅವರನ್ನು ಕಳೆದ ಎಂಟು ವರ್ಷಗಳ ಹಿಂದೆ ಕೆಸ್ತೂರು ಗ್ರಾಮದ ಗಿರೀಶ್ ಎಂಬುವರಿಗೆ ವಿವಾಹ ಮಾಡಿಕೊಡಲಾಗಿತ್ತು. ಕಳೆದ ಎರಡು ವರ್ಷಗಳ ಹಿಂದೆ ದಂಪತಿಗಳಿಬ್ಬರು ಕೆಸ್ತೂರು ಗ್ರಾಮದಲ್ಲಿ ವೈಭವ್ ಫಿಟ್ನೆಸ್ ಎಂಬ ಜಿಮ್ ಅನ್ನು ತೆರೆದು ಜೀವನ ಸಾಗಿಸುತ್ತಿದ್ದೆರನ್ನಲಾಗಿದೆ. ಎಂದಿನಂತೆ ಜಿಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಿವ್ಯ ಯಾರು ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ಪತಿ ಗಿರೀಶ್ ಸ್ಥಳದಿಂದ ಪರಾರಿಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ‌‌‌‌ಕುಟುಂಬದ ಜಗಳದಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಈಕೆಯ ಪತಿ ಗಿರೀಶ್‌ ಗೆ ಬೇರೊಬ್ಬರ ಜತೆ ಅನೈತಿಕ ಸಂಬಂಧ ಹೊಂದಿದ್ದ ಶಂಕೆ ಪತ್ನಿಗೆ ಇತ್ತು. ಹೀಗಾಗಿ ಮನನೊಂದು ದಿವ್ಯಾ ಇಂದು (ಫೆಬ್ರವರಿ 10) ಪತಿಯ ಜಿಮ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ . ಆದರೆ, ಮಗಳನ್ನು ಅಳಿಯನೇ ಹೊಡೆದು ಕೊಂದಿರುವುದಾಗಿ ದಿವ್ಯಾ ಕುಟುಂಬಸ್ಥರು ಆರೋಪಿಸಿದ್ದು, ಜಿಮ್​ನಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *