ದಕ್ಷಿಣ ಕನ್ನಡ: ಜಿಲ್ಲಾದ್ಯಂತ ಮಕ್ಕಳು ಹಾಗೂ ಹಿರಿಯರಲ್ಲೂ ಕೂಡಾ ಕಣ್ಣು ನೋವು ಖಾಯಿಲೆ ಹರಡುತ್ತಿದ್ದು, ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ.
‘ಕಂಜಕ್ಟಿವಾ’ ಎಂಬ ಕಣ್ಣುಗಳ ಸುತ್ತ ಇರುವ ಸೂಕ್ಷ್ಮ ಪದರಕ್ಕೆ ತಗುಲುವ ಸೋಂಕು ‘ಕೆಂಗಣ್ಣು ಬೇನೆ.’ ಸಾಮಾನ್ಯವಾಗಿ ವೈರಸ್ ಅಥವಾ ಬ್ಯಾಕ್ಟೀರಿಯಾ ಸೋಂಕಿನಿಂದ ಉಂಟಾಗುವ ಈ ರೋಗದಿಂದ ಬಳಲುತ್ತಿರುವವ ಸಂಖ್ಯೆ ನಗರದಲ್ಲಿ ಇತ್ತೀಚೆಗೆ ಹೆಚ್ಚಾಗಿದೆ. ರೋಗ ಲಕ್ಷಣಗಳು: ಕಣ್ಣಿನ ಸುತ್ತಲೂ ಬಿಳಿಯ ಅಥವಾ ಹಳದಿ ಬಣ್ಣದ ಲೋಳೆ ಆವರಿಸಿಕೊಳ್ಳುತ್ತದೆ. ಕಣ್ಣುಗಳು ಕೆಂಪಗಾಗಿ ಕಣ್ಣಿನಲ್ಲಿ ನೀರು ಸುರಿಯುತ್ತದೆ. ಒಂದು ಕಣ್ಣಿಗೆ ತಗುಲುವ ಸೋಂಕು ಇನ್ನೊಂದು ಕಣ್ಣಿಗೆ ಹರಡಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಈ ಎಲ್ಲಾ ಲಕ್ಷಣಗಳೊಂದಿಗೆ ವೈರಲ್ ಕೆಂಗಣ್ಣು ಬೇನೆಯಲ್ಲಿ ಕಣ್ಣಿನ ಊತ ಮತ್ತು ಲಿಂಪ್ ಗಂಥಿಯ ಸೋಂಕಿನಿಂದ ಕಿವಿಯ ಮುಂಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅಲ್ಲದೆ, ಕೆಲವು ರೋಗಿಗಳಲ್ಲಿ ಜ್ವರ, ಗಂಟಲು ನೋವು ಮತ್ತು ಶೀತ ಸೇರಿದಂತೆ ಹಲವು ಲಕ್ಷಣಗಳು ಕಂಡುಬರುತ್ತವೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡಲು ಸಾಧ್ಯವಿದೆ, ಆದರಿಂದ ಆದಷ್ಟು ಜಾಗೃತಿ ಪಾಲಿಸಬೇಕಾಗಿದೆ.