ಸುಳ್ಯ ಠಾಣಾ ವ್ಯಾಪ್ತಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಲಕ್ಷ್ಯ ಮತ್ತು ಅಪಾಯಕಾರಿ ರೀತಿಯಲ್ಲಿ ವಾಹನ ಚಾಲನೆ ಮಾಡಿದವರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ ಎಂದು ಸುಳ್ಯ ಠಾಣಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಂತೋಷ್  ಬಿ. ಪಿ ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಸುಳ್ಯ ಸಮೀಪದ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿದ್ದ 7 ಜನರಲ್ಲಿ 6 ಮಂದಿ ಅಪಾಯಕಾರಿ ಸ್ಟಂಟ್ ಮಾಡಿದ್ದರು. ಈ ಯುವಕರ ದುಸ್ಸಾಹಸದ ವಿಡೀಯೋ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಇಬ್ಬರು ಯುವಕರು ವೇಗವಾಗಿ ಚಲಿಸುತ್ತಿರುವ ಕಾರಿನ ಸನ್‌ರೂಫ್‌ನಿಂದ ಹೊರಗೆ ನಿಂತಿದ್ದರೆ, ಇಬ್ಬರು ಹಿಂಬದಿಯ ಬಾಗಿಲುಗಳಿಂದ ಹೊರಗೆ ನೇತಾಡುತ್ತಿರುವುದು ಕಾಣಬಹುದು. ಮತ್ತಿಬ್ಬರು ಯುವಕರು ಮುಂಭಾಗದ ಪ್ರಯಾಣಿಕರ ಬಾಗಿಲುಗಳಿಂದ ಹೊರಬರುತ್ತಿರುವುದು ಕಂಡುಬರುತ್ತದೆ.ಈ ಬಗ್ಗೆ ಸುಳ್ಯ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದು, ಈ ದುಸ್ಸಾಹಸ ಮಾಡಿದ ಯುವಕರ ಗುಂಪು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವರೆಂದು ಪತ್ತೆ ಮಾಡಿದ್ದಾರೆ. ಕಾರಿನಲ್ಲಿ 7 ಮಂದಿ ಇದ್ದು ಅವರು ಮಡಿಕೇರಿಯಿಂದ ಭಟ್ಕಳಕ್ಕೆ ತೆರಳುವ ವೇಳೆ ಈ ರೀತಿ ಅಪಾಯಕಾರಿ ಸ್ಟಂಟ್ ಮಾಡಿದ್ದಾರೆ. ಸಾಜೀಲ್ ಎಂಬಾತ ಕಾರನ್ನು ಚಾಲನೆ ಮಾಡುತ್ತಿದ್ದು, ಅತೀಫ್, ಸುಮನ್, ಜಯೇಶ್ (ಬಂದಿಲ್ಲ), ಸಾಜೀಬ್, ಸಾಹಿಬಝ್, ಹಸನ್ ಎಂಬವರು ಕಾರಿನ ಮೇಲೆ ಸ್ಟಂಟ್ ಮಾಡಿದ್ದಾರೆ ಎಂದು ವರದಿಯಾಗಿದೆ.ಈ ರೀತಿ ಅಪಾಯಕಾರಿ ಸ್ಟಂಟ್ ಮಾಡಿದ ಯುವಕರ ಗುಂಪನ್ನು ಸುಳ್ಯ ಪೊಲೀಸರು ಪತ್ತೆ ಹಚ್ಚಿ ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಯಲಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *