ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ (Jammu And Kashmir Terarist Attack), ಒಳ ನುಸುಳುವಿಕೆಯನ್ನು ಸಂಪೂರ್ಣವಾಗಿ ಮಟ್ಟಹಾಕಲಾಗಿದೆ ಎಂದು ಕೇಂದ್ರ ಸರ್ಕಾರ (Union Government) ಹೇಳುತ್ತಲೇ ಇದೆ. ಆದ್ರೆ ಇತ್ತೀಚೆಗೆ ಜಮ್ಮುವಿನಲ್ಲಿ ಹೆಚ್ಚಾಗುತ್ತಿರುವ ಭಯೋತ್ಪಾದಕ ದಾಳಿಗಳು ಬೇರೆಯ ಚಿತ್ರಣವನ್ನೇ ನೀಡುತ್ತಿವೆ. ಕಳೆದ ಜೂನ್ 9 ರಂದು ರಿಯಾಸಿಯಲ್ಲಿ ಯಾತ್ರಾರ್ಥಿಗಳ ಮೇಲೆ ನಡೆದ ಉಗ್ರರ ಗುಂಡಿನ ದಾಳಿ (Reasi Bus Attack) ಬಳಿಕ ಪದೇ ಪದೇ ಜಮ್ಮುವಿನಲ್ಲಿ ದಾಳಿಗಳು ನಡೆದಿವೆ. ಕುಲ್ಗಾಮ್‌ ಕಥುವಾ ಜಿಲ್ಲೆಯಲ್ಲೂ ಉಗ್ರರ ಅಟ್ಟಹಾಸ ಮುಂದುವರಿಯುತ್ತಿದೆ. ಅಷ್ಟಕ್ಕೂ ಜಮ್ಮುವಿನಲ್ಲಿ ಉಗ್ರರ ದಾಳಿ ಹೆಚ್ಚಾಗಲು ಕಾರಣವೇನು? ಕಾಶ್ಮೀರ ಕಣಿವೆ ಪ್ರದೇಶವನ್ನೇ ಗುರಿಯಾಗಿಸುತ್ತಿದ್ದ ಉಗ್ರರು ಈಗ ಜಮ್ಮುವನ್ನು (Jammu) ಟಾರ್ಗೆಟ್‌ ಮಾಡುತ್ತಿರುವುದು ಏಕೆ? ಎಂಬುದರ ಬಗ್ಗೆ ಮುಂದೆ ತಿಳಿಯೋಣ.

ಕಾಶ್ಮೀರ ಬಿಟ್ಟು ಜಮ್ಮುವಿನತ್ತ ಚಿತ್ತ ಹರಿಸಿದ್ದೇಕೆ?

2014 ರಿಂದ 2018ರ ಅವಧಿ ಜಮ್ಮು ಮತ್ತು ಕಾಶ್ಮೀರ ಸ್ಥಳಗಳು ಉಗ್ರರ ಸ್ವರ್ಗವಾಗಿತ್ತು. 2014ರಿಂದ 2018ರ ವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 1,708 ಉಗ್ರರ ದಾಳಿಗಳು ನಡೆದಿದ್ದವು, 2018ರಿಂದ 2022ರ ವರೆಗೆ 761 ಉಗ್ರರ ದಾಳಿಗಳು ನಡೆದು 174 ಮಂದಿ ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿದಾಳಿ ನಡೆಸಿದ್ದ ಸೇನೆ (Indian Army) 626 ಉಗ್ರರನ್ನು ಬಲಿ ಪಡೆದಿತ್ತು. 2023ರಲ್ಲಿ ಜಮ್ಮು ಪ್ರದೇಶದಲ್ಲಿ ಮಾತ್ರವೇ ಸುಮಾರು 40 ಭಯೋತ್ಪಾದಕ ದಾಳಿಗಳು ನಡೆದಿರುವುದಾಗಿ ಸೇನೆ ಹೇಳಿದೆ. 2019ರಲ್ಲಿಕೇಂದ್ರ ಸರ್ಕಾರ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿತು. ಆ ನಂತರ ಹೆಚ್ಚಿನ ದಾಳಿ ನಡೆಯುತ್ತಿದ್ದ ಕಾಶ್ಮೀರ ಕಣಿವೆ ಪ್ರದೇಶದಲ್ಲಿ ದೀರ್ಘಕಾಲದ ಶಾಂತಿ ನೆಲೆಸಿತ್ತು. ಹೆಚ್ಚಿನ ಭದ್ರತಾ ಪಡೆಗಳು ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಬೀಡುಬಿಟ್ಟ ಕಾರಣ ಉಗ್ರರು ಜಮ್ಮುವನ್ನು ಟಾರ್ಗೆಟ್‌ ಮಾಡಿ ದಾಳಿ ನಡೆಸುತ್ತಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.

1990ರ ದಶಕದಲ್ಲಿ ಕಥುವಾ (Kathua) ಭಯೋತ್ಪಾದಕರ ದೊಡ್ಡ ನೆಲೆಯಾಗಿ ಗುರುತಿಸಿಕೊಂಡಿತ್ತು. ಇಡೀ ಜಮ್ಮು ಮತ್ತು ಕಾಶ್ಮೀರದಾದ್ಯಂತ ದಾಳಿ ನಡೆಸಲು ಇಲ್ಲಿಯೇ ಉಗ್ರರು ಪ್ಲ್ಯಾನ್‌ ರೂಪಿಸುತ್ತಿದ್ದರು. ಸೇನೆ ವಿರುದ್ಧ ಯುದ್ಧಗಳ ತಯಾರಿಯೂ ಇಲ್ಲಿಯೇ ನಡೆಸುತ್ತಿದ್ದರು. ಕಥುವಾ ಉಧಂಪುರ, ಸಾಂಬಾ ಮತ್ತು ದೋಡಾ ಜಿಲ್ಲೆಗಳ ಪಕ್ಕದಲ್ಲಿದ್ದ ಕಾರಣ ಭದ್ರತಾ ಪಡೆಗಳು ಉಗ್ರರ ಹೆಡೆಮುರಿ ಕಟ್ಟಲು ಇಲ್ಲಿಯೇ ಬೀಡುಬಿಟ್ಟಿರುತ್ತಿದ್ದವು ಎಂದು ಅಲ್ಲಿನ ಪ್ರಾಥಮಿಕ ಮೂಲಗಳು ತಿಳಿಸಿವೆ. ಈಗ ಮತ್ತೆ ಕಥುವಾ ಉಗ್ರರ ನೆಲೆಯಾಗುತ್ತಿದೆಯೇ ಎಂಬ ಸಂಶಯ ಹುಟ್ಟಿಕೊಂಡಿದೆ. ಏಕೆಂದರೆ ಇಲ್ಲಿನ ಭೌಗೋಳಿಕತೆ ವಿಶೇಷವಾಗಿದೆ. ಒಂದು ಬದಿಯಲ್ಲಿ ಪಾಕಿಸ್ತಾನ ಗಡಿ ಇದ್ದರೆ, ಮತ್ತೊಂದು ಬದಿಯಲ್ಲಿ ಹಿಮಾಚಲ ಪ್ರದೇಶ ಇದೆ. ಮುಖ್ಯವಾಗಿ ಅರಣ್ಯ ಪ್ರದೇಶ ದಟ್ಟವಾಗಿರುವುದರಿಂದ ಉಗ್ರರು ತಪ್ಪಿಸಿಕೊಳ್ಳಲು ಅನುಕೂಲಕರ ವಾತಾವರಣ ಇದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಉಗ್ರರು ಈ ಭಾಗದ ನೆಲೆಯನ್ನು ಗುರಿಯಾಗಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಕಥುವಾದ ಜಿಲ್ಲೆಯಿಂದ ಸುಮಾರು 125 ಕಿಮೀ ದೂರದಲ್ಲಿರುವ ಮಚೇಡಿ-ಕಿಂಡ್ಲಿ-ಮಲ್ಹಾರ್‌ ಪ್ರದೇಶದಲ್ಲಿ ನಿತ್ಯ ಗಸ್ತು ತಿರುಗುತ್ತಿದ್ದ ಸೇನಾ ವಾಹವನ್ನು ಗುರಿಯಾಗಿಸಿ ಭಯೋತ್ಪಾದಕರು ಇತ್ತೀಚೆಗೆ ದಾಳಿ ನಡೆಸಿದ್ದರು. ಸೇನಾ ವಾಹನ ಬರುತ್ತಿದ್ದ ರಸ್ತೆಯಲ್ಲೇ ಗ್ರೆನೇಡ್‌ ಎಸೆದು ಸ್ಫೋಟಿಸಿದ್ದರು. ದಾಳಿ ನಡೆಸಿದ ಮರುಕ್ಷಣವೇ ದಟ್ಟ ಅರಣ್ಯದ ಕಡೆಗೆ ಓಡಿದರು. ಈ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾದರೆ, ಹಲವರು ಗಾಯಗೊಂಡಿದ್ದರು. ಸೈನಿಕರು ಪ್ರತಿದಾಳಿ ನಡೆಸಿದರೂ ಯಾವುದೇ ಉಗ್ರರನ್ನು ಪತ್ತೆಹಚ್ಚಲು ಆ ಕ್ಷಣಕ್ಕೆ ಸಾಧ್ಯವಾಗಿರಲಿಲ್ಲ. ಈ ದಾಳಿ ಬಳಿಕ ಅನೇಕ ರಹಸ್ಯಗಳು ಒಂದೊಂದೇ ಬೆಳಕಿಗೆ ಬರಲಾರಂಭಿಸಿದವು. ಭಯೋತ್ಪಾದಕರಿಗೆ ಇಲ್ಲಿನ ಸ್ಥಳೀಯರೇ ಮಾರ್ಗದರ್ಶನ ನೀಡಿದ್ದಾರೆ, ಇಲ್ಲದಿದ್ದರೆ, ಇಂತಹ ದುರ್ಗಮ ಹಾದಿಯಲ್ಲಿ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಎಂಬ ಮಾಹಿತಿ ಬೆಳಕಿಗೆ ಬಂತು. ಬಳಿಕ ಭಯೋತ್ಪಾಕ ಸಂಘಟನೆ ಕಾಶ್ಮೀರ ಟೈಗರ್ಸ್‌ ದಾಳಿಯ ಹೊಣೆ ಹೊತ್ತುಕೊಂಡಿತು. ʻಕಾಶ್ಮೀರ ಟೈಗರ್ಸ್‌ʼ ಜೈಶ್‌ ಎ ಮೊಹಮ್ಮದ್‌ ಸಂಘಟನೆಯ ಉಪ ಸಂಘಟನೆಯಾಗಿದೆ. ಈ ಸಂಘಟನೆಯ 7 ಜನರ ಗುಂಪು ಸೈನಿಕರ ಮೇಲೆ ದಾಳಿ ನಡೆಸಿತ್ತು. ಪ್ರತಿದಾಳಿ ನಡೆಸಿದ ಭಾರತೀಯ ಸೇನೆ 3 ಉಗ್ರರರನ್ನು ದೋಡಾ ಜಿಲ್ಲೆಯಲ್ಲಿ ಕೊಂದಿವೆ, ಉಳಿದ ನಾಲ್ವರಿಗಾಗಿ ಶೋಧ ನಡೆಸುತ್ತಿದ್ದಾರೆ. ಸ್ಥಳೀಯ ಭದ್ರತಾಪಡೆಗಳು ಹೇಳುವಂತೆ, ಮಳೆಗಾಲ ಸಂದರ್ಭದಲ್ಲಿ ಭದ್ರತಾಪಡೆಗಳ ಮೇಲೆ ಜಮ್ಮುವಿನಲ್ಲಿ ಹೆಚ್ಚಿನ ದಾಳಿ ನಡೆಯುತ್ತಿವೆ ಎಂದು ಹೇಳಲಾಗಿದೆ. ಏಕೆಂದರೆ ಮಳೆಯ ಸಂದರ್ಭದಲ್ಲಿ ಇಲ್ಲಿ ಬೆಳಕಿನ ಪ್ರಮಾಣ ಕಡಿಮೆಯಾಗುತ್ತದೆ. ಜೊತೆಗೆ ಭಾರೀ ಮಳೆ ಸಮಯದಲ್ಲಿ ಭದ್ರತಾಪಡೆಯ ಮೇಲ್ವಿಚಾರಣಾ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ. ಉಗ್ರರು ಇದರ ಲಾಭ ಪಡೆದುಕೊಂಡು ಗಡಿಯಾಚೆಗೆ ನುಗ್ಗಿ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗುತ್ತಾರೆ ಎಂದು ಭದ್ರತಾ ಪಡೆಗಳು ತಿಳಿಸಿವೆ. ಮತ್ತೊಂದು ವಿಚಾರವೆಂದರೆ ಜಮ್ಮುವಿನ ಜನಸಂಖ್ಯೆ ವಿಭಿನ್ನವಾಗಿದೆ. ಇಲ್ಲಿ ಹಿಂದೂಗಳ ಸಂಖ್ಯೆ 60% ಇದ್ದರೆ, ಮುಸ್ಲಿಮರ ಸಂಖ್ಯೆ 40% ಇದೆ. ಇದರ ಲಾಭ ಪಡೆದು ಉಗ್ರರು ಉದ್ದೇಶಪೂರ್ವಕವಾಗಿ ಕೋಮುಭಾವನೆ ಕೆರಳಿಸಿ, ಗಲಭೆಯಂತಹ ಸನ್ನಿವೇಶಗಳನ್ನು ಸೃಷ್ಟಿಸುತ್ತಿದ್ದಾರೆ. ಆರ್ಟಿಕಲ್‌ 370 ರದ್ದಾದ ಬಳಿಕ ಸುದೀರ್ಘ ಶಾಂತಿ ನೆಲೆಸಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಭಾರತದ ಲೋಕಸಭಾ ಚುನಾವಣೆಯೂ ಉಗ್ರರ ಕೆಂಗಣ್ಣಿಗೆ ಗುರಿಯಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 58.46% ಮತದಾನ ನಡೆದಿದ್ದು, ಇದು ಕಳೆದ 35 ವರ್ಷಗಳ ಇತಿಹಾಸದಲ್ಲಿ ದಾಖಲೆಯ ಮತದಾನವಾಗಿದೆ. ಇದರಿಂದ ಜಮ್ಮು ಮತ್ತು ಕಾಶ್ಮೀರದ ಜನ ಭಾರತದ ಪರವಾಗಿದ್ದರೇ ಎಂಬುದನ್ನೇ ಮುಖ್ಯ ಉದ್ದೇಶವಾಗಿಸಿಕೊಂಡು ಭಯೋತ್ಪಾದನಾ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದು ಅನುಮಾನ ವ್ಯಕ್ತವಾಗಿದೆ.

ಜಮ್ಮುವಿನ ವಿಸ್ತಾರ ಪ್ರದೇಶವನ್ನು ಪಾಕ್‌ ಮೂಲದ ಉಗ್ರರು ಈ ಹಿಂದೆಯೂ ಭಯೋತ್ಪಾದನಾ ಕೃತ್ಯಗಳಿಗೆ ಬಳಸಿದ್ದಾರೆ. ಸುರಂಗಗಳ ಮೂಲಕ ಉಗ್ರರು ದೇಶಕ್ಕೆ ನುಸುಳುತ್ತಿದ್ದು, ಡ್ರೋನ್‌ ಮೂಲಕ ಶಸ್ತ್ರಾಸ್ತ್ರಗಳನ್ನೂ ಸರಬರಾಜು ಮಾಡಿಕೊಳ್ಳುತ್ತಿದ್ದರು. ಅಲ್ಲದೇ ದೇಶದ ಗಡಿ ಭಾಗದಲ್ಲಿ ಹಿಂಸಾಚಾರ ಹೆಚ್ಚಿಸಲು ನಿಗೂಢ ಹತ್ಯೆ ಮಾಡುತ್ತಿದ್ದರು. ಈಗಲೂ ಅನೇಕ ಭಯೋತ್ಪಾದಕ ಗುಂಪುಗಳು ಗಡಿಯಾಚೆಗೆ ಸಕ್ರೀಯವಾಗಿವೆ. ಟಿಆರ್‌ಎಫ್, ಜಮ್ಮು ಮತ್ತು ಕಾಶ್ಮೀರ ಘಜ್ವಾನಿ ಫೋರ್ಸ್, ಕಾಶ್ಮೀರ ಟೈಗರ್ಸ್ ಮತ್ತು ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫ್ರಂಟ್ ಉಗ್ರ ಸಂಘಟನೆಗಳು ಸಕ್ರೀಯವಾಗಿವೆ. ಇವು ಆರ್ಟಿಕಲ್‌ 370 ರದ್ದಾದ ಬಳಿಕ ಅಸ್ತಿತ್ವಕ್ಕೆ ಬಂದರೂ ಇವುಗಳ ಮಾಸ್ಟರ್‌ ಮೈಂಡ್‌ ಯಾರೆಂಬುದು ಇನ್ನೂ ಬಂದಿಲ್ಲ ಎಂದು ಭದ್ರತಾಪಡೆಗಳು ಹೇಳುತ್ತಿವೆ.

ಇತ್ತೀಚೆಗೆ ಜಮ್ಮುವಿನಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿಯಲ್ಲಿ ಸೈನಿಕರು ಉಗ್ರರನ್ನು ಮಟ್ಟಹಾಕಲು ಹರಸಾಹಸ ಪಡುತ್ತಿದ್ದಾರೆ, ಇದಕ್ಕೆ ಕಾರಣವೂ ಇದೆ. ಇತ್ತೀಚೆಗೆ ಈ ಸಂಘಟನೆಗಳು ಅತ್ಯುನ್ನತ ತರಬೇತಿ ಪಡೆದ ಭಯೋತ್ಪಾದಕರನ್ನ ಉಗ್ರ ಕೃತ್ಯಗಳಿಗೆ ನಿಯೋಜಿಸುತ್ತಿದ್ದಾರೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಪರ್ವತ ಪ್ರದೇಶಗಳಲ್ಲಿ ತರಬೇತಿ ಪಡೆದ ಉಗ್ರರನ್ನು ಇಲ್ಲಿಗೆ ಕಳಿಸಲಾಗುತ್ತಿದೆ. ಅಲ್ಲದೇ ಅಮೆರಿಕ ನಿರ್ಮಿತ ಎಂ4 ಅತ್ಯಾಧುನಿಕ ರೈಫಲ್‌ ಅನ್ನು ಕೃತ್ಯಕ್ಕೆ ಬಳಸುತ್ತಿದ್ದಾರೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಉಪೇಂದ್ರ ದ್ವಿವೇದಿ ತಿಳಿಸಿದ್ದಾರೆ.

ಸದ್ಯ ಕಥುವಾ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿ ಬಳಿಕ ಎಚ್ಚೆತ್ತ ಭಾರತೀಯ ಸೇನೆಯು ಉಗ್ರರ ಹೆಡೆಮುರಿಕಟ್ಟಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಉಗ್ರ ಕೃತ್ಯಗಳನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Leave a Reply

Your email address will not be published. Required fields are marked *