ಅಗಸ್ಟ್ 15ರಂದು 78ನೇ ಸ್ವಾತಂತ್ರ್ಯ ದಿನಾಚರಣೆಗೆ (Independence Day 2024) ಇಡೀ ದೇಶವೇ ಸಜ್ಜಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಶಾಲಾ-ಕಾಲೇಜು, ಸರ್ಕಾರಿ ಹಾಗೂ ಸರ್ಕಾರೇತರ ಕಚೇರಿಗಳು, ಸಂಘ- ಸಂಸ್ಥೆಗಳಲ್ಲಿ ರಾಷ್ಟ್ರಧ್ವಜ ಹಾರಿಸಿ ಸಂಭ್ರಮದಿಂದ ಆಚರಿಸಲಾಗುತ್ತದೆ.

ಆದರೆ, ಭಾರತದ ಧ್ವಜ ಸಂಹಿತೆ 2002ರ ನಿಯಮದ ಪ್ರಕಾರ ಧ್ವಜವನ್ನು ಆಚರಿಸಲು ಅದರದ್ದೇ ಆದ ನಿಯಮಗಳಿದ್ದು, ಭಾರತೀಯ ನಾಗರಿಕರಾದ ನಾವು ಆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದು ಕಡ್ಡಾಯ. ಇಲ್ಲದಿದ್ದರೆ ಜೈಲೂಟ ಗ್ಯಾರಂಟಿ.

ರಾಷ್ಟ್ರಧ್ವಜವನ್ನು ಹಾರಿಸುವ ನಿಯಮಗಳು

  • ಧ್ವಜ ಸಂಹಿತೆ 2002ರ ಪ್ರಕಾರ, ತ್ರಿವರ್ಣ ಧ್ವಜ 3:2 ಅನುಪಾತದಲ್ಲಿ ಇರಬೇಕು. ತಿರಂಗಾವನ್ನು ತಲೆಕೆಳಗಾಗಿ ಪ್ರದರ್ಶಿಸಬಾರದು. ಕೇಸರಿ ಬಣ್ಣವು ಮೇಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮೇಲೆ ಕೇಸರಿ, ಮಧ್ಯ ಬಳಿ, ಕೆಳಗೆ ಹಸಿರು ಬಣ್ಣ ಇರಬೇಕು.
  • ಧ್ವಜವು ಗೌರವ ಸ್ಥಾನದಲ್ಲಿರಬೇಕು. ಧ್ವಜ ಹರಿದಿರಬಾರದು ಹಾಗೂ ಕೊಳಕು ಆಗಿರಬಾರದು. ಅದರ ಮೇಲೆ ಏನೂ ಬರೆಯಬಾರದು ಅಥವಾ ಮುದ್ರಿಸಬಾರದು. ಬೇರೆ ಯಾವುದೇ ಧ್ವಜವನ್ನೂ ತ್ರಿವರ್ಣ ಧ್ವಜಕ್ಕೆ ಸಮನಾಗಿ ಮತ್ತು ಎತ್ತರದಲ್ಲಿ ಹಾರಿಸಬಾರದು.
  • ಬಾವುಟದ ಮಧ್ಯಭಾಗದಲ್ಲಿ 24 ಗೆರೆಗಳ ಅಶೋಕ ಚಕ್ರ ಹೊಂದಿರಬೇಕು. ಅದು ಕಡು ನೀಲಿಯದ್ದಾಗಿರಬೇಕು. ಒಂದು ವೇಳೆ ಮನೆಯಲ್ಲಿ ಧ್ವಜ ಹಾರಿಸುತ್ತಿದ್ದರೆ, ಧ್ವಜ ವಾಲದಂತೆ ಮತ್ತು ನೆಲ ಅಥವಾ ನೀರಿಗೆ ತಾಗದಂತೆ ನೋಡಿಕೊಳ್ಳಬೇಕು.
  • ತ್ರಿವರ್ಣ ಧ್ವಜವನ್ನು ಲಂಬವಾಗಿ ಪ್ರದರ್ಶಿಸಿದಾಗ ಕೇಸರಿ ಬಣ್ಣದ ಪಟ್ಟಿಯು ಬಲಭಾಗದಲ್ಲಿ ಇರಬೇಕು. ಹೂವುಗಳು, ಹೂಮಾಲೆಗಳು ಅಥವಾ ಲಾಂಛನಗಳು ಯಾವುದೂ ರಾಷ್ಟ್ರಧ್ವಜದಲ್ಲಿ ಇರಬಾರದು. ತ್ರಿವರ್ಣ ಧ್ವಜವನ್ನು ಅಲಂಕಾರಿಕ ಉದ್ದೇಶಗಳಿಗಾಗಿ ಬಳಸಬಾರದು.
  • ಭಾರತದ ಧ್ವಜ ಸಂಹಿತೆಯ ಭಾಗ 3ರ ವಿಭಾಗ 9ರಲ್ಲಿನ ನಿಬಂಧನೆಗಳ ಪ್ರಕಾರ, ವಾಹನದ ಬಾನೇಟಿನ ಮೇಲೆ ಧ್ವಜವನ್ನು ಹಾರಿಸಬೇಕು. ವಾಹನಗಳ ಬದಿ, ಹಿಂಭಾಗ, ಮೇಲ್ಭಾಗ ಮುಚ್ಚಲು ಬಳಸಬಾರದು. ಪ್ಲಾಸ್ಟಿಕನಿಂದ ತಯಾರಿಸಿದ ರಾಷ್ಟ್ರಧ್ವಜಗಳನ್ನು ಬಳಸಬೇಡಿ.
  • ನಾವು ಧ್ವಜಾರೋಹಣದ ವೇಳೆ ಎಷ್ಟು ಗೌರವ ನೀಡುತ್ತೇವೆಯೋ ಅದೇ ರೀತಿ ಇಳಿಸುವಾಗಲೂ ಅಷ್ಟೇ ಗೌರವ ನೀಡಬೇಕು. ಧ್ವಜ ತೆಗೆದ ನಂತರ ಮಡಚಲು ಅದರದ್ದೇ ನಿಯಮಗಳಿವೆ. ಇಬ್ಬರು ಧ್ವಜ ಮಡಚಬೇಕು. ಬಾವುಟದಲ್ಲಿ ಹಸಿರು ಬಣ್ಣವನ್ನು ಮೊದಲು ಮಡಚಬೇಕು.
  • ನಂತರ ಹಸಿರು ಬಣ್ಣದ ಪಟ್ಟಿ ಮೇಲೆ ಕೇಸರಿ ಬಣ್ಣದ ಪಟ್ಟಿ ಮುಚ್ಚಬೇಕು. ಹೀಗೆ ಮಡಚಿದ ನಂತರ ಅಶೋಕ ಚಕ್ರ ಮೇಲ್ಭಾಗದಲ್ಲಿ ಕಾಣಿಸಬೇಕು. ನಂತರ ಅದನ್ನು ಸುರಕ್ಷಿತ ಸ್ಥಳದಲ್ಲಿಡಬೇಕು. ಒಂದು ವೇಳೆ ಧ್ವಜ ಹಾನಿಯಾದರೆ ಎಲ್ಲೆಂದರಲ್ಲಿ ಬಿಸಾಡಬಾರದು.
  • ತ್ರಿವರ್ಣಧ್ವಜ ಹಾನಿಯಾಗಿದ್ದರೆ ಕಸದ ಬುಟ್ಟಿ ಅಥವಾ ಬೇರೆ ಯಾವುದೇ ಸ್ಥಳದಲ್ಲಿ ಎಸೆಯಬಾರದು. ಬದಲಿಗೆ ಗೌರವಯುತವಾಗಿ ಸುಡಬೇಕು ಅಥವಾ ಹೂಳಬೇಕು. ಸುಟ್ಟ ನಂತರ ಅದರ ಬೂದಿಯನ್ನು ನದಿ ನೀರಿನಲ್ಲಿ ಬಿಟ್ಟುಬರಬೇಕು.
  • ಭಾರತದ ಧ್ವಜ ಸಂಹಿತೆ-2002, ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯಿದೆ-1971ಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರಾಷ್ಟ್ರ ಧ್ವಜಕ್ಕೆ ಅವಮಾನಿಸಿದ್ದು, ಅಗೌರವಿಸಿದ್ದು, ದುರುಪಯೋಗ ಮಾಡಿಕೊಂಡರೆ ಮೂರು ವರ್ಷಗಳ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ.
  • ರಾಷ್ಟ್ರ ಧ್ವಜಕ್ಕೆ ಸಂಬಂಧಿಸಿ ಕಠಿಣ ಕಾನೂನು ನಿಯಮಗಳಿವೆ. ರಾಷ್ಟ್ರ ಗೀತೆ ಮತ್ತು ತ್ರಿವರ್ಣ ಧ್ವಜವನ್ನು ಗೌರವಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಅದು ಪಾಲನೆಯಾಗದಿದ್ದರೆ ಶಿಕ್ಷಾರ್ಹ ಅಪರಾಧ. ಯಂತ್ರದಿಂದ ತಯಾರಿಸಿದ ಹಾಗೂ ಪಾಲಿಸ್ಟರ್ ನಿರ್ಮಿತ ರಾಷ್ಟ್ರಧ್ವಜ ಬಳಕೆಗೆ ಅವಕಾಶವಿರಲಿಲ್ಲ.
  • ಭಾರತದ ಧ್ವಜವನ್ನು ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಮಾತ್ರ ಹಾರಿಸಬಹುದು. ತ್ರಿವರ್ಣ ಧ್ವಜದ ಸಮವಸ್ತ್ರ ಧರಿಸಬಾರದು.

Leave a Reply

Your email address will not be published. Required fields are marked *