ಆರೋಗ್ಯವಂತ ಯುವಜನತೆಯೇ ಸದೃಢ ಸಮಾಜದ ನಿರ್ಮಾಣಕ್ಕೆ ಬುನಾದಿ
– ಡಾ. ಅನುರಾಧಾ ಕುರುಂಜಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ). ಸುಳ್ಯ ತಾಲೂಕು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಅಜ್ಜಾವರ ವಲಯ ಹಾಗೂ ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಒಕ್ಕೂಟ ಅಜ್ಜಾವರ ಇವುಗಳ ಸಂಯುಕ್ತ ಆಶ್ರಯದಲ್ಲಿ ಸುಳ್ಯದ ಶ್ರೀ ಶಾರದ ಪ್ರೌಢಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ದಿನಾಂಕ 03/09/2026 ರಂದು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಭಾರತಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ತಾಲೂಕಿನ ಕೇಂದ್ರ ಒಕ್ಕೂಟ ಸಮಿತಿಯ ಅಧ್ಯಕ್ಷರು, ಜನಜಾಗೃತಿ ವಲಯ ಅಧ್ಯಕ್ಷರಾದ ಶ್ರೀ ಸುರೇಶ್ ಕಣೆ ಮರಡ್ಕರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ವಲಯ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿರವರು ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದುದು, ಇಲ್ಲಿ ಯಾರೂ ದುಶ್ಚಟಕ್ಕೆ ಬಲಿಯಾಗದೆ ಜೀವನದಲ್ಲಿ ಉತ್ತಮ ಪ್ರಜೆಯಾಗಿ ಬಾಳಬೇಕು, ಆರೋಗ್ಯವಂತ ಯುವಜನತೆಯೇ ಸದೃಢ ಸಮಾಜದ ನಿರ್ಮಾಣಕ್ಕೆ ಬುನಾದಿ ಎಂದು ಹೇಳುತ್ತಾ, ಹದಿಹರೆಯದ ವಯಸ್ಸಿನಲ್ಲಿ ಬೀಡಿ, ಸಿಗರೇಟು, ತಂಬಾಕು, ಗಾಂಜಾ , ಮಧ್ಯ ಸೇವನೆಗಳಿಗೆ ಬಲಿಯಾಗುತ್ತಿದ್ದಾರೆ .ಇಂತಹ ದುಶ್ಚಟಗಳಿಂದ ವಿದ್ಯಾರ್ಥಿಗಳ ಜೀವನ ಹಾಳಾಗುತ್ತಿದೆ. ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ, ಧಾರ್ಮಿಕವಾಗಿ ಸ್ವಸ್ಥರಾಗುವುದರೊಂದಿಗೆ, ಸ್ವಾಮಿ ವಿವೇಕಾನಂದರಂತಹ ಯೂತ್ ಐಕಾನ್ ಗಳ ಆದರ್ಶವನ್ನು ತಮ್ಮಲ್ಲಿ ಪಾಲಿಸಿಕೊಂಡು. ಮುಂದಿನ ಜೀವನದಲ್ಲಿ ಆದರ್ಶ ಪ್ರಜೆಯಾಗಿ ಬಾಳಬೇಕು. ಸ್ವಾಸ್ತ್ಯ ಸಮಾಜ ನಿರ್ಮಾಣದಲ್ಲಿ ನಾವೆಲ್ಲರೂ ಕೈಜೋಡಿಸಬೇಕು ಎಂದರು. ಕೊನೆಯದಾಗಿ ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಜನಜಾಗೃತಿ ಸದಸ್ಯರಾದ ಶ್ರೀ ಸುಬ್ಬಪಾಟಾಲಿ, ಜನಜಾಗೃತಿ ಸದಸ್ಯರು, ಕಾಂತಮಂಗಲ ಒಕ್ಕೂಟದ ಅಧ್ಯಕ್ಷರಾದ ಸತೀಶ್ ರವರು ಉಪಸ್ಥಿತರಿದ್ದರು. ವಲಯದ ಮೇಲ್ವಿಚಾರಕಿ ಅನಿತಾ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಭವ್ಯ ಸ್ವಾಗತಿಸಿ, ಸೇವಾ ಪ್ರತಿನಿಧಿ ವೇದಾವತಿ ಧನ್ಯವಾದ ಸಮರ್ಪಿಸಿದರು.
