ಕಲ್ಲುಗುಂಡಿ: ಸುನ್ನಿ ಸೆಂಟರ್ನಲ್ಲಿ ಸೆಪ್ಟೆಂಬರ್ 13 ರಂದು ಎಸ್.ಎಸ್.ಎಫ್., ಎಸ್.ವೈ.ಎಸ್. ಹಾಗೂ ಮುಸ್ಲಿಂ ಜಮಾಅತ್ ಕಲ್ಲುಗುಂಡಿ ಯೂನಿಟ್ ಜಂಟಿ ಆಶ್ರಯದಲ್ಲಿ ಮೌಲಿದ್ ಮಜ್ಲಿಸ್, ಮಹ್ಳರತುಲ್ ಬದ್ರಿಯ್ಯ ಹಾಗೂ ತಾಜುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮವು ಶ್ರದ್ಧಾ-ಭಕ್ತಿಗಳೊಂದಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಕಾರರಾಗಿ ಆಗಮಿಸಿದ್ದ ಜಲೀಲ್ ಸಖಾಫಿ ಕೊಂಡಂಗೇರಿ ಅವರು ಮಾತನಾಡಿ, “ಪ್ರವಾದಿ ಪ್ರೇಮ ಮತ್ತು ಧಾರ್ಮಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ” ಎಂದು ಪ್ರವಾದಿ ಪ್ರೇಮ ಹಾಗೂ ಧಾರ್ಮಿಕ ಜಾಗೃತಿಯ ಕುರಿತು ನೆರೆದಿದ್ದ ಜನರಿಗೆ ಆಧ್ಯಾತ್ಮಿಕ ಸಂದೇಶ ನೀಡಿದರು.
ಆರಂಭದಲ್ಲಿ ಫೈಝಲ್ ಝುಹ್ರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಉದ್ದೇಶ ಮತ್ತು ಮಹತ್ವವನ್ನು ಹಂಚಿಕೊಂಡು “ತಾಜುಲ್ ಉಲಮಾ ಅವರ ಜೀವನ ಮತ್ತು ಆದರ್ಶಗಳು ಸಮಾಜಕ್ಕೆ ಎಂದೆಂದಿಗೂ ದಾರಿದೀಪ” ಎಂದರು.
ಕಾರ್ಯಕ್ರಮದ ಅಂಗವಾಗಿ ನಡೆದ ವಿಶೇಷ ಮೌಲಿದ್ ಮಜ್ಲಿಸ್ ಮತ್ತು ಮಹ್ಳರತುಲ್ ಬದ್ರಿಯ್ಯ ಮಜ್ಲಿಸ್ ನಲ್ಲಿ ಊರಿನ ಹಾಗೂ ಸುತ್ತಮುತ್ತಲ ಪ್ರದೇಶದ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು, ಧಾರ್ಮಿಕ ನಾಯಕರು ಹಾಗೂ ಕಾರ್ಯಕರ್ತರು ಭಕ್ತಿಪೂರ್ವಕವಾಗಿ ಭಾಗವಹಿಸಿದರು.
