ಸುಳ್ಯ: ಸುಳ್ಯ ತಾಲೂಕು ರಚನೆಯಾಗಿ 60 ವರ್ಷಗಳು ಕಳೆದರೂ ಬಾಳುಗೋಡು ಗ್ರಾಮಕ್ಕೆ ಈವರೆಗೆ ಕೆಎಸ್‌ಆರ್‌ಟಿಸಿ (KSRTC) ಬಸ್ ಸೌಲಭ್ಯ ಇಲ್ಲದಿರುವುದು ವಿಪರ್ಯಾಸವಾಗಿತ್ತು. ಇದೀಗ ಸುಳ್ಯ-ಬಾಳುಗೋಡು ಮಾರ್ಗದಲ್ಲಿ ನೂತನ ಬಸ್ ಸಂಚಾರ ಆರಂಭವಾಗಿದ್ದು, ಇದು ಬಾಳುಗೋಡು ಗ್ರಾಮ ಕಾಂಗ್ರೆಸ್ ಹಾಗೂ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ನಿರಂತರ ಪ್ರಯತ್ನದ ಫಲವಾಗಿದೆ ಎಂದು ಸಮಿತಿಯ ಸದಸ್ಯರಾದ ಭವಾನಿಶಂಕರ್ ಕಲ್ಮಡ್ಕ ತಿಳಿಸಿದ್ದಾರೆ.

​ಈ ಕುರಿತು ಮಾಹಿತಿ ನೀಡಿರುವ ಅವರು, ಬಾಳುಗೋಡು ರಸ್ತೆಯಲ್ಲಿ ನೂತನ ಬಸ್ ಸಂಚಾರ ಪ್ರಾರಂಭವಾಗಬೇಕೆಂದು ಆಗ್ರಹಿಸಿ ಬಾಳುಗೋಡು ಗ್ರಾಮ ಕಾಂಗ್ರೆಸ್ ಅಧ್ಯಕ್ಷ ರವಿಕುಮಾರ್ ಕಿರಿಭಾಗ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಅವರು ನಿರಂತರ ಶ್ರಮ ವಹಿಸಿದ್ದರು. ಈ ಸಂಬಂಧ 2025ರ ಜೂನ್ 27 ರಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಗೆ ಮತ್ತು ಸುಳ್ಯ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಗಿತ್ತು. ಈ ಮನವಿಗೆ ಸ್ಪಂದಿಸಿ, ಸಮಿತಿಯು ನಡೆಸಿದ ಪ್ರಯತ್ನದಿಂದಾಗಿ ಇದೀಗ ಬಸ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಹೇಳಿದರು.

ಬಸ್ ಸಂಚಾರದ ಸಮಯ:

ನೂತನ ಬಸ್ಸು ಪ್ರತಿದಿನ ಬೆಳಿಗ್ಗೆ 7.05ಕ್ಕೆ ಬಾಳುಗೋಡುನಿಂದ ಸುಳ್ಯಕ್ಕೆ ಹಾಗೂ ಸಂಜೆ 5.20ಕ್ಕೆ ಸುಳ್ಯದಿಂದ ಬಾಳುಗೋಡಿಗೆ ಸಂಚರಿಸಲಿದೆ.

ಎಬಿವಿಪಿ ವಿರುದ್ಧ ಟೀಕೆ:

ಇದೇ ವೇಳೆ ಎಬಿವಿಪಿ (ABVP) ಹೇಳಿಕೆಗೆ ತಿರುಗೇಟು ನೀಡಿದ ಭವಾನಿಶಂಕರ್ ಅವರು, “ಯಾರದ್ದೋ ಪ್ರಯತ್ನದಿಂದ ಬಸ್ ಸಂಚಾರ ಆರಂಭವಾಗಿದ್ದರೆ, ಎಬಿವಿಪಿಯವರು ಮಾಹಿತಿ ಇಲ್ಲದೆ ಶಾಸಕರ ಸ್ಪಂದನೆ ಎಂದು ಹೇಳಿಕೆ ನೀಡುವ ಮೂಲಕ ಬಿಟ್ಟಿ ಪ್ರಚಾರ ಪಡೆಯುತ್ತಿರುವುದು ವಿಪರ್ಯಾಸ,” ಎಂದು ಟೀಕಿಸಿದ್ದಾರೆ. ಇದು ಸಂಪೂರ್ಣವಾಗಿ ಕಾಂಗ್ರೆಸ್ ಮುಖಂಡರ ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿಯ ಶ್ರಮದ ಫಲಿತಾಂಶ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *