ಕನಕಮಜಲಿನಲ್ಲಿ ಅಂಗಡಿ ಕಳವು ನಡೆಸುತ್ತಿದ್ದಾಗಲೇ ಇಬ್ಬರು ಕಳ್ಳರನ್ನು ಊರವರು ರೆಡ್ ಹ್ಯಾಂಡಾಗಿ ಹಿಡಿದು ಪೋಲೀಸರಿಗೊಪ್ಪಿಸಿರುವ ಘಟನೆ ವರದಿಯಾಗಿದೆ.
ಕನಕಮಜಲು ಗ್ರಾಮದ ಶ್ರೀ ಗಣೇಶ್ ಸ್ಟೋರ್ ನ ಒಳಗೆ ರಾತ್ರಿ ಸುಮಾರು 3.30 ಕ್ಕೆ ಜೋರು ಶಬ್ದ ಕೇಳುತ್ತಿತ್ತೆಂದೂ, ಇದು ಸೀತಾರಾಮ ಗೌಡರ ಮಗನಿಗೆ ಕೇಳಿ ಅವರು ಅಂಗಡಿ ಬಳಿ ಬಂದು ನೋಡಿದಾಗ, ಎದುರೊಂದು ರಿಟ್ಝ್ ಕಾರು ಇತ್ತೆಂದೂ, ಅಂಗಡಿ ಶೆಟರ್ ಒಡೆದಿತ್ತೆನ್ನಲಾಗಿದೆ. ತಕ್ಷಣ ಅವರು ಮನೆಯವರಿಗೆ ಹಾಗೂ ಕನಕಮಜಲಿನ ಸ್ಥಳೀಯರಿಗೆ ಈ ವಿಷಯ ತಿಳಿಸಿದ್ದು, ತಕ್ಷಣ ಅಂಗಡಿಯೆದುರು ಜನ ಸೇರಿ ಅಂಗಡಿಯ ಎದುರುನಿಂತಿದ್ದ ಹಾಗೂ ಅಂಗಡಿಯೊಳಗೆ ಕಳವು ನಡೆಸುತ್ತಿದ್ದ ಕಳ್ಳನನ್ನು ಹಿಡಿದಿದ್ದಾರೆ. ವಿಚಾರಿಸಿದಾಗ ಬಂಟ್ವಾಳದ ಸಜೀಪ ಮೂಲದ ಸುಹೈಲ್ ಹಾಗು ರಿಯಾಜ್ ಎಂದು ಪರಿಚಯ ಹೇಳಿದರೆನ್ನಲಾಗಿದೆ. ಅಲ್ಲದೆ ಬಾಡಿಗೆ ಕಾರಿನಲ್ಲಿ ಅವರು ಬಂದಿದ್ದರೆಂದು ತಿಳಿದುಬಂದಿದೆ. ಬಳಿಕ ಆ ಇಬ್ಬರು ಕಳ್ಳರನ್ನು ಪೋಲೀಸರಿಗೆ ಒಪ್ಪಿಸಿದರೆಂದು ತಿಳಿದುಬಂದಿದೆ. ಕನಕಮಜಲು ಪರಿಸರದಲ್ಲಿ ಇತ್ತೀಚಿನ ಕೆಲ ವರ್ಷದಿಂದ ಕೆಲವು ಕಳವು ಪ್ರಕರಣ ನಡೆದಿತ್ತು. ಅದೆಲ್ಲವೂ ಇದುವರೆಗೆ ಪತ್ತೆಯಾಗಿರಲಿಲ್ಲ. ಇದೀಗ ರೆಡ್ ಹ್ಯಾಂಡಾಗಿ ಊರವರೇ ಸೇರಿ ಕಳ್ಳನನ್ನು ಹಿಡಿದಿದ್ದಾರೆ.