
ರಾಷ್ಟ್ರಮಟ್ಟದ ನೀಟ್ (NEET) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ದೇಶದ ಲಕ್ಷಾಂತರ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯದ ಜೊತೆಗಿನ ಆಟವಾಗಿದ್ದು, ಇದರ ವಿರುದ್ಧ ನಡೆಯಲಿರುವ ಪ್ರತಿಭಟನಾ ರ್ಯಾಲಿಯನ್ನು ಯಶಸ್ವಿಗೊಳಿಸುವಂತೆ ಎಸ್ಸೆಸ್ಸೆಫ್ (SSF) ದ.ಕ ಈಸ್ಟ್ ಜಿಲ್ಲಾ ಕ್ಯಾಂಪಸ್ ಚೇಂಬರ್ ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಸ್ವಾದಿಕ್ ಕಲ್ಲುಗುಂಡಿ, ಪತ್ರಿಕೆ ಸೋರಿಕೆಯ ಗಂಭೀರತೆ ಹಾಗೂ ಹೋರಾಟದ ಅಗತ್ಯತೆಯನ್ನು ಈ ಕೆಳಗಿನಂತೆ ವಿವರಿಸಿದ್ದಾರೆ.
ಶೈಕ್ಷಣಿಕ ನೈತಿಕತೆಯ ಪತನ: ವರ್ಷಗಟ್ಟಲೆ ಶ್ರಮವಹಿಸಿ ಓದಿದ ಅರ್ಹ ವಿದ್ಯಾರ್ಥಿಗಳಿಗೆ ಈ ಸೋರಿಕೆಯಿಂದಾಗಿ ಅನ್ಯಾಯವಾಗಿದೆ. ಹಣಬಲದ ಮೂಲಕ ಸೀಟು ಗಿಟ್ಟಿಸುವ ದಂಧೆಕೋರರಿಂದಾಗಿ ಶೈಕ್ಷಣಿಕ ವ್ಯವಸ್ಥೆಯ ಪಾವಿತ್ರ್ಯತೆ ಹಾಳಾಗಿದೆ.
ವ್ಯವಸ್ಥೆಯ ಮೇಲಿನ ನಂಬಿಕೆಗೆ ದ್ರೋಹ: ಎನ್ಟಿಎ (NTA) ಅಂತಹ ರಾಷ್ಟ್ರೀಯ ಸಂಸ್ಥೆಗಳ ಮೇಲೆ ವಿದ್ಯಾರ್ಥಿಗಳು ಇಟ್ಟಿದ್ದ ನಂಬಿಕೆ ಇಂದು ಪ್ರಶ್ನಾರ್ಥಕವಾಗಿದೆ. ಈ ಅಕ್ರಮವು ಕೇವಲ ಪರೀಕ್ಷೆಗೆ ಸೀಮಿತವಾಗದೆ, ದೇಶದ ವೈದ್ಯಕೀಯ ಕ್ಷೇತ್ರದ ಗುಣಮಟ್ಟಕ್ಕೂ ಹೊಡೆತ ನೀಡಲಿದೆ.
ಬೃಹತ್ ರ್ಯಾಲಿಯ ಅನಿವಾರ್ಯತೆ: ಈ ಹಗರಣದ ಹಿಂದೆ ಇರುವ ಪ್ರಭಾವಿಗಳನ್ನು ಪತ್ತೆಹಚ್ಚಿ ಸಂತ್ರಸ್ತ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕಾದ್ದು ಸರ್ಕಾರದ ಕರ್ತವ್ಯ. ಸರ್ಕಾರದ ಮೇಲೆ ಒತ್ತಡ ಹೇರಲು ಮತ್ತು ವಿದ್ಯಾರ್ಥಿಗಳ ಆಕ್ರೋಶವನ್ನು ಸಂಘಟಿತವಾಗಿ ದಾಖಲಿಸಲು ಈ ರ್ಯಾಲಿ ಅನಿವಾರ್ಯವಾಗಿದೆ.
“ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ನಡೆಯುತ್ತಿರುವ ಈ ಹೋರಾಟದಲ್ಲಿ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ರಾಜಕೀಯ ರಹಿತವಾಗಿ ಭಾಗವಹಿಸಬೇಕು. ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ವ್ಯಾಪ್ತಿಯಲ್ಲಿ ಪುತ್ತೂರು, ಸುಳ್ಯ, ಬೆಳ್ತಂಗಡಿ, ಉಪ್ಪಿನಂಗಡಿ, ಕಡಬ ಹಾಗೂ ವಿಟ್ಲ ಎಂಬ 6 ಡಿವಿಷನ್ ಗಳಿದ್ದು, ಡಿವಿಷನ್ ಕೇಂದ್ರಗಳಲ್ಲಿ ನಡೆಯುವ ರ್ಯಾಲಿಯನ್ನು ಯಶಸ್ವಿಗೊಳಿಸುವ ಮೂಲಕ ನ್ಯಾಯಕ್ಕಾಗಿ ಧ್ವನಿ ಎತ್ತಬೇಕು” ಎಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ.






