ಸುಳ್ಯ: ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಪ್ರಧಾನಿ ನರೇಂದ್ರ ಮೋದಿಯವರು ದೇಶವಾಸಿಗಳಿಗೆ ಮಿತವ್ಯಯದ (ಖರ್ಚು ಕಡಿತ) ಕರೆ ನೀಡಿದ್ದಾರೆ. ಪ್ರಧಾನಿಯವರ ಈ ಕರೆಗೆ ಸ್ಪಂದಿಸಿರುವ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು, ತಮ್ಮ ಕಾರನ್ನು ಬಿಟ್ಟು ಸರ್ಕಾರಿ ಬಸ್ ಹಾಗೂ ಆಟೋದಲ್ಲಿ ಪ್ರಯಾಣಿಸಿದ್ದಾರೆ.

ಮೇ 16ರಂದು ಶಾಸಕರು ಸಾಮಾನ್ಯ ಜನರಂತೆ ಸರ್ಕಾರಿ ಸಾರಿಗೆ ಬಸ್ ಹಾಗೂ ಆಟೋ ರಿಕ್ಷಾದಲ್ಲಿ ಪ್ರಯಾಣಿಸಿ, ತಮ್ಮ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮಿತವ್ಯಯದ ಸಂದೇಶ ಸಾರಿದ್ದಾರೆ.
ಸಾರ್ವಜನಿಕರ ಪ್ರಶ್ನೆ: ಈ ಬಸ್, ಆಟೋ ಪ್ರಯಾಣ ಇನ್ನು ಎಷ್ಟು ದಿನ?
ಶಾಸಕಿಯ ಈ ಸರಳತೆಯನ್ನು ಕೆಲವರು ಶ್ಲಾಘಿಸುತ್ತಿದ್ದರೆ, ಮತ್ತೊಂದೆಡೆ ಸಾರ್ವಜನಿಕ ವಲಯದಲ್ಲಿ ಕೆಲವು ಕುತೂಹಲಕಾರಿ ಪ್ರಶ್ನೆಗಳು ಮೂಡಿವೆ. “ಶಾಸಕರು ಕೇವಲ ಒಂದು ದಿನದ ಮಟ್ಟಿಗೆ ಸಾಂಕೇತಿಕವಾಗಿ ಹೀಗೆ ಮಾಡಿದ್ದಾರೋ ಅಥವಾ ಮುಂದಿನ ದಿನಗಳಲ್ಲೂ ಇದೇ ರೀತಿ ಕಾರು ಬಿಟ್ಟು ಬಸ್ ಮತ್ತು ಆಟೋಗಳಲ್ಲಿಯೇ ಪ್ರಯಾಣಿಸುತ್ತಾರೋ? ಅವರ ಈ ಮಿತವ್ಯಯದ ನಡೆ ಇನ್ನು ಎಷ್ಟು ದಿನಗಳವರೆಗೆ ಮುಂದುವರಿಯಲಿದೆ?” ಎಂದು ಜನರು ಚರ್ಚಿಸುತ್ತಿದ್ದಾರೆ. ಶಾಸಕರು ತಮ್ಮ ಈ ನಡೆಯನ್ನು ಮುಂದೆಯೂ ಕಾಯ್ದುಕೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.






