ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಲೋಕಭವನದಲ್ಲಿ ನಡೆದಂತ ಸರಳ ಸಮಾರಂಭದಲ್ಲಿ ಡಿ.ಕೆ ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಡಿ.ಕೆ ಶಿವಕುಮಾರ್ ಅವರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದಂತ ಡಿ.ಕೆ ಶಿವಕುಮಾರ್ ಅವರು ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆ ಮೂಲಕ ಇಂದಿನಿಂದ ಡಿ.ಕೆ ಶಿವಕುಮಾರ್ ದರ್ಬಾರ್ ಆರಂಭಗೊಂಡಂತೆ ಆಗಿದೆ.

ಕರ್ನಾಟಕ ರಾಜಕಾರಣದ ಧ್ರುವತಾರೆ, ಸಂಘಟನಾ ಚತುರ ಮತ್ತು ಪ್ರಸ್ತುತ ರಾಜ್ಯದ ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡಿರುವ ದೊಡ್ಡಆಲಹಳ್ಳಿ ಕೆಂಪೇಗೌಡ ಶಿವಕುಮಾರ್ (D. K. Shivakumar) ಅವರ ಜೀವನ, ಸಾಧನೆ ಮತ್ತು ರಾಜಕೀಯ ಹಾದಿಯ ಸವಿಸ್ತಾರವಾದ ಪ್ರೊಫೈಲ್ ಇಲ್ಲಿದೆ.

ಡಿ.ಕೆ. ಶಿವಕುಮಾರ್: ಕನಕಪುರದ ಬಂಡೆಯಿಂದ ವಿಧಾನಸೌಧದ ಗದ್ದುಗೆಯವರೆಗೆ!

ರಾಜ್ಯ ರಾಜಕಾರಣದಲ್ಲಿ ‘ಟ್ರಬಲ್ ಶೂಟರ್’ ಎಂದೇ ಖ್ಯಾತರಾಗಿರುವ ಡಿ.ಕೆ. ಶಿವಕುಮಾರ್ (DKS) ಅವರು ಕೇವಲ ಒಬ್ಬ ನಾಯಕರಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷದ ಅತ್ಯಂತ ಶಕ್ತಿಶಾಲಿ ತಂತ್ರಗಾರರಾಗಿದ್ದಾರೆ.ತಮ್ಮ ಬಿಡದ ಛಲ, ಅವಿರತ ಹೋರಾಟ ಮತ್ತು ಕಠಿಣ ಸನ್ನಿವೇಶಗಳನ್ನೂ ರಾಜಕೀಯ ಬಂಡವಾಳವಾಗಿ ಪರಿವರ್ತಿಸುವ ಚಾಣಾಕ್ಷತನದಿಂದ ಇಂದು ಅವರು ರಾಜ್ಯದ ಅತ್ಯುನ್ನತ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದಾರೆ.

ಬಾಲ್ಯ ಮತ್ತು ಶಿಕ್ಷಣ

  • ಜನನ: ಡಿ.ಕೆ. ಶಿವಕುಮಾರ್ ಅವರು ಮೇ 15, 1962 ರಂದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿ ಗ್ರಾಮದ ಕೃಷಿಕ ಕುಟುಂಬದಲ್ಲಿ ಜನಿಸಿದರು.ಇವರ ತಂದೆ ಕೆಂಪೇಗೌಡ ಮತ್ತು ತಾಯಿ ಗೌರಮ್ಮ. ರಾಜಕಾರಣಿಯಾಗಿರುವ ಡಿ.ಕೆ. ಸುರೇಶ್ ಇವರ ಸಹೋದರ.
  • ಶಿಕ್ಷಣ: ಕನಕಪುರದ ಸೇಂಟ್ ರೀಟಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು, ಬಳಿಕ ಬೆಂಗಳೂರಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಹಾಗೂ ಆರ್.ಸಿ. ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು.ಶ್ರೀ ಜಗದ್ಗುರು ರೇಣುಕಾಚಾರ್ಯ (SJRC) ಕಾಲೇಜಿನಿಂದ ಕಲಾ ಪದವಿ (BA) ಪಡೆದ ಇವರು, ನಂತರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ (MA) ಪದವಿ ಪೂರೈಸಿದ್ದಾರೆ.

ವಿದ್ಯಾರ್ಥಿ ದೆಸೆಯಿಂದಲೇ ಆರಂಭವಾದ ರಾಜಕೀಯ ಪಯಣ

ಶಿವಕುಮಾರ್ ಅವರ ರಾಜಕೀಯ ಆಸಕ್ತಿ ವಿದ್ಯಾರ್ಥಿ ಜೀವನದಲ್ಲೇ ಮೊಳಕೆಯೊಡೆಯಿತು.ತಮ್ಮ 18ನೇ ವಯಸ್ಸಿನಲ್ಲಿಯೇ ಕಾಂಗ್ರೆಸ್‌ನ ವಿದ್ಯಾರ್ಥಿ ವಿಭಾಗವಾದ ಎನ್‌ಎಸ್‌ಯುಐ (NSUI) ಸೇರುವ ಮೂಲಕ ರಾಜಕೀಯ ಪ್ರವೇಶಿಸಿದರು.ನಂತರ ಯುವ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.

ಹೆಚ್.ಡಿ. ದೇವೇಗೌಡರ ವಿರುದ್ಧದ ಐತಿಹಾಸಿಕ ಸ್ಪರ್ಧೆ

  • 1985 ರ ಧೀರ ನಡೆ: ಕೇವಲ 23 ವರ್ಷದ ಯುವಕನಾಗಿದ್ದಾಗ ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷವು ಸಾತನೂರು ಕ್ಷೇತ್ರದಲ್ಲಿ ಅಂದಿನ ದೈತ್ಯ ನಾಯಕ ಹೆಚ್.ಡಿ. ದೇವೇಗೌಡರ ವಿರುದ್ಧ ಸ್ಪರ್ಧಿಸಲು ಟಿಕೆಟ್ ನೀಡಿತು.ಆ ಚುನಾವಣೆಯಲ್ಲಿ ಡಿಕೆಶಿ ಸೋತರೂ, ದೇವೇಗೌಡರಿಗೆ ಪ್ರಬಲ ಪ್ರತಿರೋಧ ಒಡ್ಡುವ ಮೂಲಕ ಇಡೀ ರಾಜ್ಯದ ಗಮನ ಸೆಳೆದರು.
  • ಜೈಂಟ್ ಕಿಲ್ಲರ್ ಖ್ಯಾತಿ: ಮುಂದೆ 14 ವರ್ಷಗಳ ನಂತರ (1999 ರಲ್ಲಿ), ಇದೇ ಸಾತನೂರು ಕ್ಷೇತ್ರದಲ್ಲಿ ದೇವೇಗೌಡರ ಪುತ್ರ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಸೋಲಿಸುವ ಮೂಲಕ ‘ಜೈಂಟ್ ಕಿಲ್ಲರ್’ ಎಂಬ ಬಿರುದನ್ನು ಸಂಪಾದಿಸಿದರು.

ಶಾಸಕರಾಗಿ ಮತ್ತು ಸಚಿವರಾಗಿ ಬೆಳೆದ ಹಾದಿ

  • 1989 – ಮೊದಲ ಜಯ: ಸಾತನೂರು ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗ ಅವರಿಗೆ ಕೇವಲ 27 ವರ್ಷ.
  • 1991 – ಕಿರಿಯ ವಯಸ್ಸಿನ ಸಚಿವ: ಎಸ್. ಬಂಗಾರಪ್ಪ ಅವರ ಸಂಪುಟದಲ್ಲಿ ಬಂಧಿಖಾನೆ ಮತ್ತು ಗೃಹರಕ್ಷಕ ದಳದ ಸಚಿವರಾಗಿ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಮಂತ್ರಿಪಟ್ಟ ಅಲಂಕರಿಸಿದರು.
  • ಎಸ್.ಎಂ. ಕೃಷ್ಣ ಅವಧಿ (1999-2004): ಎಸ್.ಎಂ. ಕೃಷ್ಣ ಅವರ ಆಪ್ತ ವಲಯದಲ್ಲಿದ್ದ ಡಿಕೆಶಿ, ಸಹಕಾರ ಮತ್ತು ನಗರಾಭಿವೃದ್ಧಿ ಖಾತೆಯ ಸಚಿವರಾಗಿ ಬೆಂಗಳೂರಿನ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದರು.
  • ಸಿದ್ಧರಾಮಯ್ಯ ಅವಧಿ (2013-2018): ಸಿದ್ಧರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಇಂಧನ ಸಚಿವರಾಗಿ ಕಾರ್ಯನಿರ್ವಹಿಸಿ, ರಾಜ್ಯದಲ್ಲಿದ್ದ ವಿದ್ಯುತ್ ಕೊರತೆಯನ್ನು ನೀಗಿಸಲು ಶ್ರಮಿಸಿದರು ಮತ್ತು ‘ಹೊಸ ಬೆಳಕು’ ಯೋಜನೆ ಜಾರಿಗೊಳಿಸಿದರು.
  • ಮೈತ್ರಿ ಸರ್ಕಾರ (2018): ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿ ಜವಾಬ್ದಾರಿ ನಿಭಾಯಿಸಿದರು.

ರಾಷ್ಟ್ರಮಟ್ಟದ ‘ಟ್ರಬಲ್ ಶೂಟರ್’ ಮತ್ತು ಕೆಪಿಸಿಸಿ ಸಾರಥ್ಯ

ಕಾಂಗ್ರೆಸ್ ಪಕ್ಷಕ್ಕೆ ಸಂಕಷ್ಟ ಬಂದಾಗಲೆಲ್ಲಾ ರಕ್ಷಣೆಗೆ ನಿಲ್ಲುವ ನಾಯಕ ಡಿಕೆಶಿ.2002ರಲ್ಲಿ ಮಹಾರಾಷ್ಟ್ರದ ವಿಲಾಸ್ರಾವ್ ದೇಶ್ಮುಖ್ ಸರ್ಕಾರ ಹಾಗೂ 2017ರಲ್ಲಿ ಗುಜರಾತ್‌ನ ಅಹಮದ್ ಪಟೇಲ್ ಅವರ ರಾಜಸಭಾ ಚುನಾವಣೆ ಸಂದರ್ಭದಲ್ಲಿ ಶಾಸಕರನ್ನು ರಕ್ಷಿಸಿ ಯಶಸ್ವಿ ಆಪರೇಷನ್ ನಡೆಸುವ ಮೂಲಕ ಇವರು ರಾಷ್ಟ್ರಮಟ್ಟದಲ್ಲಿ ಹೈಕಮಾಂಡ್‌ನ ಪರಮಾಪ್ತರಾದರು.

2020ರಲ್ಲಿ ಕೋವಿಡ್ ಕಠಿಣ ಸಮಯದಲ್ಲಿ ಕೆಪಿಸಿಸಿ (KPCC) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಇವರು, ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿ, ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದರು.2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 135 ಸ್ಥಾನಗಳನ್ನು ಗೆದ್ದು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಇವರ ಸಂಘಟನಾ ಶಕ್ತಿಯೇ ಪ್ರಮುಖ ಕಾರಣವಾಯಿತು.

ವೈಯಕ್ತಿಕ ಜೀವನ

ಡಿ.ಕೆ. ಶಿವಕುಮಾರ್ ಅವರು 1993 ರಲ್ಲಿ ಉಷಾ ಅವರನ್ನು ವಿವಾಹವಾದರು.ಈ ದಂಪತಿಗೆ ಐಶ್ವರ್ಯ, ಆಭರಣ ಎಂಬ ಇಬ್ಬರು ಪುತ್ರಿಯರು ಹಾಗೂ ಆಕಾಶ್ ಎಂಬ ಒಬ್ಬ ಪುತ್ರನಿದ್ದಾನೆ. ಇವರ ಹಿರಿಯ ಪುತ್ರಿ ಐಶ್ವರ್ಯ ಅವರು ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ಧಾರ್ಥ ಅವರ ಪುತ್ರ ಅಮರ್ತ್ಯ ಅವರನ್ನು ವಿವಾಹವಾಗಿದ್ದಾರೆ.

ಉಪಮುಖ್ಯಮಂತ್ರಿಯಿಂದ ಮುಖ್ಯಮಂತ್ರಿಯವರೆಗೆ

2023ರಲ್ಲಿ ಸಿದ್ಧರಾಮಯ್ಯ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿ ಹಾಗೂ ಜಲಸಂಪನ್ಮೂಲ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡರು.ತದನಂತರದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ, ಜೂನ್ 3, 2026 ರಂದು ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಗದ್ದುಗೆಗೇರಿದ್ದಾರೆ. ಅವರ ಮುಂದಿನ ಹಾದಿ ಸುಗಮವಾಗಿರಲಿ ಎಂದು ಹಾರೈಸೋಣ..

Source: Kannada news now

Leave a Reply

Your email address will not be published. Required fields are marked *