ಮಂಗಳೂರು: ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ಬಕ್ರೀದ್ ಹಬ್ಬವು ಬರುತ್ತಿದೆ. ಸಂಘಪರಿವಾರ ಕಾರ್ಯಕರ್ತರು ಮುಸ್ಲಿಮರ ಹಬ್ಬಕ್ಕೆ ತೊಂದರೆ ತಂದೊಡ್ದುವ ಕೃತ್ಯಕ್ಕೆ ಮುಂದಾಗಿದ್ದು, ಬಕ್ರೀದ್ ಹಬ್ಬದ ಪ್ರಮುಖ ಘಟ್ಟವಾದ ಕುರ್ಬಾನಿಗೆ ಅಡ್ಡಿಪಡಿಸಲು ಯತ್ನಿಸುತ್ತಿದೆ. ಅಲ್ಲಲ್ಲಿ ಪ್ರಮುಖವಾಗಿ ಒಳಗಿನ ರಸ್ತೆಗಳಲ್ಲಿ ವಾಹನಗಳನ್ನು ಪರಿಶೀಲನೆ ನಡೆಸುವಂತಹ ಘಟನೆಗಳು ನಿರಂತರವಾಗಿ ಸಂಘಪರಿವಾರ ಕಾರ್ಯಕರ್ತರಿಂದ ನಡೆಯುತ್ತಿದೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ತಿಂಗಳಲ್ಲಿ ಮೂರು ಹತ್ಯೆಗಳು, ಹಲವಾರು ಹತ್ಯಾ ಯತ್ನ ಪ್ರಕರಣಗಳು ನಡೆದಿದೆ. ಜಿಲ್ಲೆ ಈಗಲೂ ಬೂದಿ ಮುಚ್ಚಿದ ಕೆಂಡದಂತಿದೆ. ಪೋಲಿಸ್ ಇಲಾಖೆ FIR ದಾಖಲಿಸುತ್ತಾ ಇದ್ದರೂ ಕೂಡ ಸಂಘಪರಿವಾರ ಅರಾಜಕತೆಯನ್ನು ಸೃಷ್ಟಿಸಲು ಷಡ್ಯಂತರಗಳನ್ನು ನಡೆಸುತ್ತಲೇ ಇದೆ. ಈ ಸಂದರ್ಭದಲ್ಲಿ ಸಂಘಪರಿವಾರ ದನ ಸಾಗಾಟದ ಹೆಸರಿನಲ್ಲಿ ಕಾರ್ಯಾಚರಣೆಗೆ ಇಳಿದು ಶಾಂತಿ ಕದಡುವ ಹುನ್ನಾರ ನಡೆಸುತ್ತಿದೆ. ಪೋಲಿಸ್ ಇಲಾಖೆ ಬಕ್ರೀದ್ ಹಬ್ಬಕ್ಕೆ ಗರಿಷ್ಠ ಬಂದೋಬಸ್ತ್ ನೀಡಿ ಬಕ್ರೀದ್ ಹಬ್ಬವನ್ನು ಯಾವುದೇ ಆತಂಕ ವಿಲ್ಲದೆ ಸುಸೂತ್ರವಾಗಿ ಆಚರಿಸಲು ಕ್ರಮ ಕೈಗೊಳ್ಳಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.