
ಪೆರಾಜೆ: “ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ ಕರ್ನಾಟಕ”, ಹಿರಿಯ ವಿದ್ಯಾರ್ಥಿ ಸಂಘ ಕನ್ನಡ ಪೆರಾಜೆ ಹಾಗೂ ಎಸ್ಡಿಎಂಸಿ ಸಹಿಪ್ರಾ ಶಾಲೆ ಕನ್ನಡ ಪೆರಾಜೆ ಇವುಗಳ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಮತ್ತು ಸರ್ಕಾರಿ ಶಾಲೆಯ ಮಕ್ಕಳಿಗೆ ಗಿಡ ಹಸ್ತಾಂತರ ಮಾಡುವ ಅರ್ಥಪೂರ್ಣ ಕಾರ್ಯಕ್ರಮವು ಜೂನ್ ೫ ಬೆಳಿಗ್ಗೆ 10 ಗಂಟೆಗೆ ಶಾಲಾ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಂಪಾಜೆ ಡೆಪ್ಯೂಟಿ ರೇಂಜ್ ಫಾರೆಸ್ಟ್ ಆಫೀಸರ್ (ಡಿ.ಆರ್.ಎಫ್.ಒ) ಶ್ರೀರಕ್ಷಾ ರವರು ಗಿಡ ನೆಡುವುದರ ಮೂಲಕ ನೆರವೇರಿಸಿದರು. ಸಿದ್ದಗಂಗಾ ಫಾರೆಸ್ಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ಶಾಲಾ ಮಕ್ಕಳ ಮತ್ತು ಸಾರ್ವಜನಿಕರ ಪಾತ್ರದ ಕುರಿತು ಜಾಗೃತಿ ಮೂಡಿಸಿದರು.
ಮೊಹಮ್ಮದ್ ಟ್ಯಾಂಕರ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ:
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಊರಿನ ಹಿರಿಯ ವ್ಯಕ್ತಿ, ಪ್ರಸಿದ್ಧ ಕ್ರೀಡಾಪಟು ಹಾಗೂ ಎಲ್ಲರ ಆತ್ಮೀಯ ಸ್ನೇಹಿತರಾಗಿದ್ದ ಮೊಹಮ್ಮದ್ ಟ್ಯಾಂಕರ್ ಅವರಿಗೆ ಕಾರ್ಯಕ್ರಮದಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸುವ ಮೂಲಕ ಭಾವಪೂರ್ಣ ಗೌರವ ಅರ್ಪಿಸಲಾಯಿತು.
ಸಾಧಕರಿಗೆ ಸನ್ಮಾನ:
ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ನೀರು ಸರಬರಾಜು ಮಾಡುವ ಮೂಲಕ ಪರೋಪಕಾರಿಯಾಗಿ ಗುರುತಿಸಿಕೊಂಡಿರುವ ಮೊಯಿದೀನ್ ಹಾಗೂ ಸ್ಥಳೀಯ ಲೈನ್ ಮ್ಯಾನ್ ಬಸವರಾಜು ರವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ, ಶಾಲಾ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಹೆಮ್ಮೆಯ ಕ್ಷಣಕ್ಕೆ ಶಾಲೆಯ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮಿ ಮೇಡಂ, “ಕನ್ನಡ ಶಾಲೆ ಉಳಿಸಿ ಬೆಳೆಸಿ” ಅಭಿಯಾನದ ರಾಜ್ಯಧ್ಯಕ್ಷರಾದ ಉನೈಸ್ ಪೆರಾಜೆ, ಪೆರಾಜೆ ಜುಮಾ ಮಸೀದಿ ಅಧ್ಯಕ್ಷರಾದ ನಾಸಿರ್ ಎನ್.ಎ., ಪಂಚಾಯತ್ ಸಿಬ್ಬಂದಿ ಶ್ರೀನಾಥ್, ಊರಿನ ಪ್ರಮುಖರಾದ ಅಶೋಕ ಪೀಚೆಮನೆ, ರವಿಚಂದ್ರ, ಶಿಹಾಬ್ ಪೆರಾಜೆ, ತವೀದ್, ಶಾಲೆಯ ಅಧ್ಯಾಪಕ ವೃಂದ ಹಾಗೂ ಮುದ್ದಾದ ಶಾಲಾ ಮಕ್ಕಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.







