ಅಹಮ್ಮದಬಾದ್ ವಿಮಾನ ದುರಂತದಲ್ಲಿ ಮೃತಪಟ್ಟ ಕೇರಳ ಮೂಲದ ನರ್ಸ್ ರಂಜಿತಾ ಜಿ. ನಾಯರ್ ವಿರುದ್ಧ ಸಾಮಾಜಿಕ ಜಾಲತಾಣಗಳ ಮೂಲಕ ಅವಹೇಳನಕಾರಿ ಪೋಸ್ಟ್ ಮಾಡಿದ ವೆಳ್ಳರಿಕುಂಡು ತಾಲೂಕು ಉಪ ತಹಶೀಲ್ದಾರ್ ಎ. ಪವಿತ್ರನ್ ನನ್ನು ಸೇವೆಯಿಂದ ಅಮಾನತುಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ಜಿಲ್ಲಾಧಿಕಾರಿ ಕೆ. ಇಂಪಾಶೇಖರ್ ರವರ ಆದೇಶದಂತೆ ಉಪ ತಹಶೀಲ್ದಾರ್ ಎ. ಪವಿತ್ರನ್ ನನ್ನು ಸೇವೆಯಿಂದ ಅಮಾನತು ಗೊಳಿಸಲಾಗಿದೆ. ಲಂಡನ್ ನಲ್ಲಿ ನರ್ಸ್ ಆಗಿದ್ದ ಪಥನಂತಿಟ್ಟದ ರಂಜಿತಾ ಅವರ ಉದ್ಯೋಗ ಹಾಗೂ ಜಾತಿಯನ್ನು ಅವಮಾನ ಮಾಡಿ ಪವಿತ್ರನ್ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದರು. ವಿವಾದ ಉಂಟಾಗುತ್ತಿದ್ದಂತೆ ಫೇಸ್ ಬುಕ್ ಪೋಸ್ಟ್ ನ್ನು ಡಿಲೀಟ್ ಮಾಡಿದ್ದರು. ಈ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಕೆ.ಇಂಪಾಶೇಖರ್ ಗೆ ರಾಜ್ಯ ಕಂದಾಯ ಸಚಿವ ಕೆ. ರಾಜನ್ ಆದೇಶ ನೀಡಿದ್ದರು.
ಈ ಹಿಂದೆ ಕೂಡಾ ಪವಿತ್ರನ್ ಇಂತಹ ಹಲವು ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಈ ಬಗ್ಗೆ ಜಿಲ್ಲಾ ಹೆಚ್ಚುವರಿ ದಂಡಾಧಿಕಾರಿ ಮುನ್ನೆಚ್ಚರಿಕೆ ನೀಡಿದ್ದರು. ಕಾಞಿಂಗಾಡ್ ಶಾಸಕ ಇ. ಚಂದ್ರಾ ಶೇಖರ್ ರನ್ನು ನಿಂದಿಸಿದಕ್ಕಾಗಿ ಅಮಾನತು ಗೊಳಿಸಲಾಗಿತ್ತು. ಎರಡು ತಿಂಗಳ ಬಳಿಕ ಮುನ್ನೆಚ್ಚರಿಕೆ ನೀಡಿ ಸೇವೆಗೆ ಮರು ಸೇರ್ಪಡೆಗೊಳಿಸಲಾಗಿತ್ತು. ಅಮಾನತು ಮುನ್ನೆಚ್ಚರಿಕೆ ನೀಡಿದರೂ ನಿರಂತರವಾಗಿ ಕಂದಾಯ ಇಲಾಖೆ ಹಾಗೂ ವೈಯುಕ್ತಿಕವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ನಿಂದನೆ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರಕಾರ ಅಮಾನತುಗೊಳಿಸಿ ಆದೇಶ ನೀಡಿದೆ.
ಪವಿತ್ರನ್ ರನ್ನು ಬಂಧಿಸಿದ ಪೊಲೀಸರು
ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಬಗ್ಗೆ ಮಹಿಳಾ ಸಂಘಟನೆ ಸೇರಿದಂತೆ ಲಭಿಸಿದ ದೂರಿನಂತೆ ಪವಿತ್ರನ್ ರನ್ನು ಶುಕ್ರವಾರ ಸಂಜೆ ವೆಳ್ಳರಿಕುಂಡು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ