2010ರಲ್ಲಿ ಮಂಗಳೂರು ವಿಮಾನ ಅಪಘಾತ ಸಂಭವಿಸಿದಾಗ ಕೂಡ ಸಾಕಷ್ಟು ಮಂದಿಗೆ ಆರ್ಥಿಕ ನೆರವು ನೀಡಿದ ಸಂಶೀರ್
ಅಹಮದಾಬಾದ್, ಜೂನ್ 17: ಗುಜರಾತ್ನ ಏರ್ ಇಂಡಿಯಾ(Air India) ಅಪಘಾತದಲ್ಲಿ ಮೃತಪಟ್ಟ ವೈದ್ಯಕೀಯ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ರೂ. ಘೋಷಣೆ ಮಾಡುವ ಮೂಲಕ ಭಾರತ ಮೂಲದ ಯುಎಇಯಲ್ಲಿರುವ ವೈದ್ಯ ಶಂಶೀರ್ ಉದಾರತೆ ಮೆರೆದಿದ್ದಾರೆ. ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು 270 ಮಂದಿ ಮೃತಪಟ್ಟಿದ್ದರು. ವಿಮಾನವು ವೈದ್ಯಕೀಯ ಕಾಲೇಜಿನ ಕಟ್ಟಡಕ್ಕೆ ಅಪ್ಪಳಿಸಿದ ಪರಿಣಾಮ 30ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು.
ಅದರಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರೂ ಇದ್ದರು. ಹಲವು ಮಂದಿ ಗಾಯಗೊಂಡಿದ್ದಾರೆ. ಕೇವಲ ಮೃತರ ಕುಟುಂಬಕ್ಕೆ ಮಾತ್ರವಲ್ಲ ಗಾಯಾಳುಗಳಿಗೂ ಸಹಾಯ ಮಾಡುವುದಾಗಿ ಘೋಷಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಐದು ವಿದ್ಯಾರ್ಥಿಗಳಿಗೆ ತಲಾ 20 ಲಕ್ಷ ರೂ. ಮತ್ತು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ವೈದ್ಯರ ಕುಟುಂಬಗಳಿಗೆ ತಲಾ 20 ಲಕ್ಷ ರೂ.ನೀಡಲಾಗುತ್ತದೆ. ಅಗತ್ಯವಿರುವವರಿಗೆ ತಕ್ಷಣದ ನೆರವು ಸಿಗುವಂತೆ ನೋಡಿಕೊಳ್ಳಲು ಬಿಜೆ ವೈದ್ಯಕೀಯ ಕಾಲೇಜಿನಲ್ಲಿ ಜೂನಿಯರ್ ವೈದ್ಯರ ಸಂಘದ ಸಮನ್ವಯದ ಸಹಾಯದಿಂದ ಆರ್ಥಿಕ ಸಹಾಯವನ್ನು ವಿತರಿಸಲಾಗುವುದು ಎಂದು ಶಂಶೀರ್ ಅವರ ಹೇಳಿಕೆ ತಿಳಿಸಿದೆ. ಅಬುಧಾಬಿಯಿಂದ ಪರಿಹಾರವನ್ನು ಘೋಷಿಸಿದ ಬುರ್ಜೀಲ್ ಹೋಲ್ಡಿಂಗ್ಸ್ನ ಸಂಸ್ಥಾಪಕ ಮತ್ತು ವಿಪಿಎಸ್ ಹೆಲ್ತ್ನ ವ್ಯವಸ್ಥಾಪಕ ನಿರ್ದೇಶಕ ಡಾ. ಶಂಶೀರ್, ಅಪಘಾತದ ನಂತರದ ಪರಿಣಾಮಗಳನ್ನು ನೋಡಿ ತೀವ್ರ ದುಃಖಿತನಾಗಿದ್ದೇನೆ ಎಂದು ಹೇಳಿದರು.
ಅಹಮದಾಬಾದ್ನ ಕಾಲೇಜಿನ ಅತುಲ್ಯಂ ಹಾಸ್ಟೆಲ್ ಮೇಲೆ ವಿಮಾನ ಅಪಘಾತಕ್ಕೀಡಾಯಿತು. ಈ ವಿಮಾನ ಅಪಘಾತಕ್ಕೀಡಾದಾಗ ವೈದ್ಯಕೀಯ ಕಾಲೇಜಿನಲ್ಲಿ ಊಟದ ಸಮಯವಾಗಿತ್ತು. ವಿಮಾನದ ಒಂದು ಭಾಗ ಹಾಸ್ಟೆಲ್ ಮೇಲೆ ಬಿದ್ದಾಗ ಇಡೀ ಪ್ರದೇಶವು ಅವಶೇಷಗಳಾಗಿ ಮಾರ್ಪಟ್ಟಿತು.
ಶಂಶೀರ್ 2010ರಲ್ಲಿ ಮಂಗಳೂರು ವಿಮಾನ ಅಪಘಾತ ಸಂಭವಿಸಿದಾಗ ಕೂಡ ಸಾಕಷ್ಟು ಮಂದಿಗೆ ಆರ್ಥಿಕ ನೆರವು ಹಾಗೂ ಉದ್ಯೋಗಾವಕಾಶಗಳನ್ನು ಒದಗಿಸಿದ್ದರು.