ಅರಂಬೂರು ಘಟಕ ಗೌಡ ಸಮಿತಿ ವತಿಯಿಂದ ಅರಂಬೂರು ವಲಯದ ಗೌಡ ಬಾಂಧವರಿಗೆ ವಿವಿಧ ಸ್ಪರ್ಧೆಗಳೊಂದಿಗೆ “ಗದ್ದೆಯಲ್ಲಿ ಒಂದು ದಿನ” ಕಾರ್ಯಕ್ರಮ ಜೂನ್ 21ರಂದು ಅರಂಬೂರು ಗದ್ದೆಬೈಲುನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕರಾದ ಅಪ್ಪಯ್ಯ ಗೌಡ ಪಡ್ಪು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌಡ ಮಹಿಳಾ ಘಟಕದ ಅಧ್ಯಕ್ಷೆ ಡಾ. ಅನುರಾಧಾ ಕುರುಂಜಿ ವಹಿಸಿದ್ದರು. ವೇದಿಕೆಯಲ್ಲಿ ಅರಂಬೂರು ವಲಯದ ಊರುಗೌಡರಾದ ಹುಕ್ರಪ್ಪ ನೆಡ್ಚಿಲು, ಪದ್ಮಯ ಗೌಡ ಪಡ್ಪು, ಗೌಡ ಪುರುಷ ಘಟಕದ ಅಧ್ಯಕ್ಷ ಮನೋಹರ ಅರಂಬೂರು, ಉಪಾಧ್ಯಕ್ಷ ಕೃಷ್ಣಪ್ಪ ಕೆದಂಬಾಡಿ, ಗೌರವ ಸಲಹೆಗಾರರಾದ ಹಾರಾವತಿ ಕುಡೆಕಲ್ಲು, ಉಷಾ ಚಂದ್ರಶೇಖರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಘಟಕದ ಸದಸ್ಯೆ ಸುಮನಾ ನೆಡ್ಚಿಲು ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಪುರುಷ ಘಟಕದ ಕಾರ್ಯದರ್ಶಿ ಗಂಗಾಧರ ನೆಡ್ಚಿಲು ಸ್ವಾಗತಿಸಿ, ಅಶೋಕ್ ಪೀಚೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ “ಕೂಡಿ ಆಡೋಣ” ಎನ್ನುವ ಶೀರ್ಷಿಕೆಯಡಿಯಲ್ಲಿ ಅರಂಬೂರು ವಲಯದ ಗೌಡ ಬಾಂಧವರಿಗೆ ಗದ್ದೆಯಲ್ಲಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳನ್ನು ಹುಕ್ರಪ್ಪ ಗೌಡರು ತೆಂಗಿನಕಾಯಿ ಒಡೆದು ಉದ್ಘಾಟಿಸಿದರು. ನಿಧಿ ಶೋಧ, ಮಡಿಕೆ ಒಡೆಯುವುದು, ಕೆಸರುಗದ್ದೆ ಓಟ, ನಿಂಬೆಹಣ್ಣು ಓಟ, ಬಲೂನು ಒಡೆಯುವುದು, ಹಗ್ಗ ಜಗ್ಗಾಟ, ಸ್ಪರ್ಧೆಗಳೊಂದಿಗೆ ದಂಪತಿಗಳಿಗೆ ಹಮ್ಮಿಕೊಂಡ ಹಾಳೆ ಎಳೆಯುವ ಸ್ಪರ್ಧೆಯು ಎಲ್ಲರ ಗಮನ ಸೆಳೆಯಿತು.

ಸಮಾರೋಪ ಸಮಾರಂಭ: ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪುರುಷ ಘಟಕದ ಅಧ್ಯಕ್ಷ ಮನೋಹರ ಅರಂಬೂರು ವಹಿಸಿದ್ದರು. ವೇದಿಕೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಅನುರಾಧಾ ಕುರುಂಜಿ, ಊರುಗೌಡ ಹುಕ್ರಪ್ಪ ನೆಡ್ಚಿಲು, ಹೇಮಲತಾ ಕನ್ಯಾನ, ಉಪಾಧ್ಯಕ್ಷ ಕೃಷ್ಣಪ್ಪ ಕೆದಂಬಾಡಿ, ಗೌರವ ಸಲಹೆಗಾರರಾದ ಹಾರಾವತಿ ಕುಡೆಕಲ್ಲು, ಉಷಾ ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಮಹಿಳಾ ಘಟಕದ ಕಾರ್ಯದರ್ಶಿ ವೇದಾವತಿ ನೆಡ್ಚಿಲು ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು.

Leave a Reply

Your email address will not be published. Required fields are marked *